ಧರ್ಮಪುರ: ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ನಾಗರಿಕರು ಗ್ರಾಮೀಣ ಅಂಚೆ ಜೀವ ವಿಮೆ ಮಾಡಿಸಿ. ಅದರ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಧರ್ಮಪುರ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಿ ತಿಳಿಸಿದರು.
ಭಾರತೀಯ ಅಂಚೆ ಇಲಾಖೆ ಚಿತ್ರದುರ್ಗ ಇವರು ಬುಧವಾರ ಧರ್ಮಪುರದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಅಂಚೆ ಜೀವ ವಿಮೆ ಪ್ರಚಾರ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚಿತ್ರದುರ್ಗ ಅಂಚೆ ಇಲಾಖೆಯ ಅಧೀಕ್ಷಕರಾದ ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಅಂಚೆ ಜೀವ ವಿಮೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಜನರು ತಮ್ಮ ಭವಿಷ್ಯದ ಯೋಜನೆಗಾಗಿ ಹಣವನ್ನು ಉಳಿತಾಯ ಮಾಡಲು ಈ ಯೋಜನೆ ಅನುಕೂಲವಾಗಿದೆ. ಕಡಿಮೆ ಕಂತಿನಲ್ಲಿ ಉತ್ತಮ ಲಾಭಾಂಶವೂ ಈ ಯೋಜನೆಯ ಮೂಲಕ ದೊರೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಮನೆ ಬಾಗಿಲಿಗೆ ಈ ಯೋಜನೆಯ ಉದ್ದೇಶಗಳನ್ನು ಕೊಂಡೊಯ್ಯುವದೇ ಆಗಿದೆ ಎಂದರು.
ಸಹಾಯಕ ಅಂಚೆ ಅಧೀಕ್ಷಕರಾದ ಗೋಪಾಲಕೃಷ್ಣ, ತಾಲ್ಲೂಕು ಅಂಚೆ ನಿರೀಕ್ಷಕರಾದ ಜಯಪ್ಪ ಮಾತನಾಡಿದರು.
ಜಾಥಾ ಕಾರ್ಯಕ್ರಮದಲ್ಲಿ ಹರಿಯಬ್ಬೆ ಉಪ ಅಂಚೆ ಕಛೇರಿಯ ಚಂದ್ರಪ್ಪ, ನಾಗಭೂಷಣ, ನಾಗರಾಜು, ಕಾಂತರಾಜು ಭಾಗವಹಿಸಿದ್ದರು.
6ಕ್ಕೆ ಕುವೆಂಪು ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಶಿವಮೊಗ್ಗ: ಕುವೆಂಪು ವಿ.ವಿಯ ಬೆಳ್ಳಿ ಹಬ್ಬದ ಪ್ರಯುಕ್ತ ಸ್ನಾತಕೋತ್ತರ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಸಂಶೋಧನ ವಿಭಾಗ ಜ. 6 ಮತ್ತು 7ರಂದು ಜ್ಞಾನ ಸಹ್ಯಾದ್ರಿಯ ಪ್ರೊ.ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ `ರಿವಿಲೇಷನ್ ಆಫ್ ಕರೆಂಟ್ ಟ್ರೆಂಡ್ಸ್ ಅಂಡ್ ಇಶ್ಯೂಸ್ ಇನ್ ಫಿಜಿಕಲ್ ಎಜುಕೇಶನ್~ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಬೆಂಗಳೂರು ಯುಸಿಪಿಇ ಶಿಕ್ಷಣ ಸಂಸ್ಥೆಯ ಡೀನ್ ಪ್ರೊ.ಎಲ್.ಆರ್. ವೈದ್ಯನಾಥನ್ ಉದ್ಘಾಟಿಸುವರು. ಎನ್ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಅತಿಥಿಗಳಾಗಿ ಆಗಮಿಸುವರು. ಕುವೆಂಪು ವಿ.ವಿ. ಕುಲಪತಿ ಪ್ರೊ.ಎಸ್.ಎ. ಬಾರಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.