ರಾಣೆಬೆನ್ನೂರು: ಗ್ರಾಮೀಣ ಪ್ರದೇಶದ ಬಡವರಿಗೆ ಜೀವವಿಮೆ ನೀಡುವುದರಿಂದ ಅವರಲ್ಲಿ ಉಳಿತಾಯದ ಮನೋಭಾವ ಬೆಳೆದು ತಮ್ಮ ಆರ್ಥಿಕ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಯತ್ತ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಹಾವೇರಿ ವಿಭಾಗದ ಅಂಚೆ ಅಧಿಕ್ಷಕ ಆರ್.ಜಿ. ಬೆಟ್ಟಪ್ಪನವರ ಹೇಳಿದರು.
ನಗರದ ಹಿರೇಮಠ ಸಭಾಭವನದಲ್ಲಿ ನಡೆದ ಗ್ರಾಮೀಣ ಅಂಚೆ ಜೀವ ವಿಮಾ ನೌಕರರಿಗೆ ತರಬೇತಿ ಶಿಬಿರ ಹಾಗೂ ಉತ್ತಮ ಸೇವೆ ಸಲ್ಲಿಸಿದ ನೌಕರರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ, ಕೂಲಿ ಕಾರ್ಮಿಕರಿಗೆ, ಸ್ತ್ರಿ ಶಕ್ತಿ ಗುಂಪುಗಳಿಗೆ ಅಂಚೆ ವಿಮೆಯ ಬಗ್ಗೆ ಮಾಹಿತಿ ಹಾಗೂ ಅಂಚೆ ಸೇವೆಯನ್ನು ತ್ವರಿತವಾಗಿ ಸಾರ್ವಜನಿಕರಿಗೆ ತಲುಪಿಸಲು ನೌಕರರು ಶ್ರಮಿಸಬೇಕೆಂದು ಬೆಟ್ಟಪ್ಪನವರ ಕರೆ ನೀಡಿದರು.
ಅಂಚೆ ಇಲಾಖೆಯ ಅಂಚೆ ನಿರೀಕ್ಷಕ ಜಿತೇದ್ರ ನಿಂಗೊಜಿ ಮಾತನಾಡಿ, ಇಲಾಖೆಯ ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಿ ಗ್ರಾಮೀಣ ಅಂಚೆ ಜೀವ ವಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಹಕಾರದಿಂದ ನಿಗದಿತ ಗುರಿಯನ್ನು ತಲುಪುವ ವಿಶ್ವಾಸ ವ್ಯಕ್ತಪಡಿಸಿದರು.
2011-12ನೇ ಸಾಲಿನಲ್ಲಿ ಗ್ರಾಮೀಣ ಅಂಚೆ ಜೀವ ವಿಮೆಯಲ್ಲಿ ಸಾಧನೆ ಮಾಡಿದ ಸಾಧಕರಾದ ಟಿ.ಕೆ. ಕಾಸಿಕರ್, ಬಿ.ಎಂ. ಗಾಮದ್, ಎಚ್.ಎಂ. ಕಮ್ಮೋರ ಅವರನ್ನು ಸನ್ಮಾನಿಸಿದರು. ಅಲ್ಲದೆ ಹತ್ತು ಜನ ನೌಕರರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಎಸ್.ಎನ್. ಕೊಪ್ಪಳ, ಯಲ್ಲಪ್ಪ ಜಾಡರ, ಪ್ರೇಮಾ ವಾಲಿ, ಎ.ಎ. ಅತ್ತಾರ, ಎನ್.ವಿ. ತಾಮ್ರಧ್ವಜ, ಹೊಳಿಬಸಣ್ಣನವರ ಸೇರಿದಂತೆ ತಾಲ್ಲೂಕು ಅಂಚೆ ನೌಕರರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ವೈ.ಎಸ್. ಗೋಣೆಣ್ಣನವರ ಪ್ರಾರ್ಥಿಸಿದರು. ಎಂ.ಕೆ. ಕಮ್ಮೋರ ನಿರೂಪಿಸಿದರು. ಎಲ್.ಸಿ. ಹಜಾರಿ ವಂದಿಸಿದರು.