ಕವಿತಾಳ: ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ದಿಗೆ ಆದ್ಯತೆ ನೀಡಿದೆ ಎಂದು ತುಂಗಭದ್ರ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ್ ಹೇಳಿದರು.
ಸಮೀಪದ ಮಲ್ಲದಗುಡ್ಡದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳಿಗೆ ಸೈಕಲ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತುಂಗಭದ್ರ ಎಡದಂಡೆ ನಾಲೆಗೆ ಆಧುನೀಕರಣ ಮತ್ತು ಶಾಶ್ವತ ದುರಸ್ತಿ ಕೈಗೊಂಡಿದ್ದರಿಂದ ನೀರು ಪೋಲಾಗುತ್ತಿಲ್ಲ.
ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ ಮತ್ತು ಗ್ರಾಮೀಣ ಮಕ್ಕಳ ಶೈಕ್ಷಕಣಿಕ ಪ್ರಗತಿಗಾಗಿ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಸೈಕಲ್ ವಿತರಣೆ ಮಾಡುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಪಾಲಕರಿಗೆ ಆರ್ಥಿಕ ಹೊರೆ ಕಡಿಮೆ ಮಾಡಿದ್ದಾರೆ ಎಂದರು.
ಮಸ್ಕಿ ಶಾಸಕ ಪ್ರತಾಪ ಪಾಟೀಲ್ ಮಾತನಾಡಿ ಬಸವ ಇಂದಿರಾ ವಸತಿ ಯೋಜನೆಯಡಿ ಗುಡಿಸಲು ರಹಿತ ಗ್ರಾಮ ಯೋಜನೆಗೆ ಕ್ಷೇತ್ರದಲ್ಲಿ ಚಾಲನೆ ನೀಡಿಲಾಗಿದೆ ಎಂದರು. ಸಾವಯವ ಕೃಷಿಗೆ ಉತ್ತೇಜನ ನೀಡಲು ಮಾಜಿ ಸಿಎಂ ಬಿಎಸ್ವೈ ಆರಂಭಿಸಿದ ಕಾರ್ಯಕ್ರಮದಂತೆ ಮುಖ್ಯಮಂತ್ರಿ ಸದಾನಂದಗೌಡ ಸಿಂಧನೂರು ತಾಲ್ಲೂಕು ಮಸ್ಕಿ ಕ್ಷೇತ್ರ ವ್ಯಾಪ್ತಿಯ ಗುಡಿಹಾಳ ಗ್ರಾಮದ ರೈತ ಭೀಮರಾವ್ ದೇಶಪಾಂಡೆ ಮನೆಗೆ ಸೆ.22ರಂದು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಿಶ್ವನಾಥ ಪಾಟೀಲ್ ತೋರಣದಿನ್ನಿ ಮತ್ತು ಬಿಜೆಪಿ ಅಧ್ಯಕ್ಷ ಮಲ್ಲಪ್ಪ ಅಂಕುಶದೊಡ್ಡಿ ಮಾತನಾಡಿದರು. ಶರಣಪ್ಪ ಮೊಕಾಶಿ, ಈರಣ್ಣ ಸೂಡಿ, ಶಿವಕುಮಾರ ವಟಗಲ್, ಪಕೀರಯ್ಯ, ಸೂಗಪ್ಪ, ಶರಣಪ್ಪ ತೋರಣದ್ನಿ, ಚಂದ್ರಕಾಂತ ಗೂಗೆಬಾಳ, ಕರಿಯಪ್ಪ, ಪಂಪಣ್ಣ, ಜಗಧೀಶ ಸ್ವಾಮಿ ಮತ್ತು ಚಂದ್ರಯ್ಯ ಇತರರು ವೇದಿಕೆ ಮೇಲಿದ್ದರು. 141 ವಿದ್ಯಾರ್ಥಿಗಳಿಗೆ ಸೈಕಲ್ಗಳನ್ನು ವಿತರಿಸಲಾಯಿತು.