ಹನುಮಸಾಗರ: ಆಧುನಿಕ ಕಾಲದ ಕ್ರೀಡೆಗಳ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಮರೆಯಾಗುತ್ತಲಿವೆ ಎಂದು ಮೈನುದ್ದೀನ್ಸಾಬ ಖಾಜಿ ಹೇಳಿದರು.
ಭಾನುವಾರ ದಸರಾ ಹಬ್ಬದ ಅಂಗವಾಗಿ ಇಲ್ಲಿನ ಬೀರಲಿಂಗೇಶ್ವರ ಡೊಳ್ಳಿನ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆ ಹಾಗೂ ಟಗರಿನ ಕಾಳಗ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ರೈತಾಪಿ ಜನರು ತಮ್ಮ ಬಿಡುವಿನ ವೇಳೆಯಲ್ಲಿ ವರ್ಷಕ್ಕೊಂದು ಬಾರಿ ಆಚರಿಸಿಕೊಂಡು ಬರುತ್ತಿರುವ ಈ ಟಗರಿನ ಕಾಳಗವೂ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಕೊಂಡಿಯಾಗಿದೆ ಎಂದು ಹೇಳಿದರು.
ಮುಖಂಡ ವಿ.ಎಚ್.ನಾಗೂರ ಮಾತನಾಡಿ ಇಂತಹ ಕ್ರೀಡೆಗಳ ಜೊತಗೆ ಯುವಕರು ಪಕ್ಕಾ ಗ್ರಾಮೀಣ ಕ್ರೀಡೆಗಳಾಗಿರುವ ಭಾರ ಎತ್ತು ಸ್ಫರ್ಧೆ, ಮುಂಗೈ ಆಟ, ಕಬಡ್ಡಿ, ಚೀಲ ಹೊರುವ ಸ್ಫರ್ಧೆಗಳನ್ನು ಆಯೋಜಿಸಿ ಅವುಗಳಲ್ಲಿ ತಮ್ಮ ಕಸರತ್ತು ಪ್ರದರ್ಶಿಸಬೇಕು ಎಂದು ಹೇಳಿದರು.
ಹಾಲುಮತ ಸಮಾಜದ ಅಧ್ಯಕ್ಷ ಬಸಪ್ಪ ಕಿಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಪ್ಪ ಬಿಂಗಿ, ವಿರುಪಾಕ್ಷಪ್ಪ ಹುನಗುಂದ ಮದ್ನಾಳ, ದ್ಯಾಮಣ್ಣ ಬಿಂಗಿ, ಪೀರ್ಸಾಬ ಮೇಸ್ತ್ರಿ, ಹನುಮಂತ ಹಡಪದ, ಈರಪ್ಪ ಬಿಂಗಿ, ಕನಕಪ್ಪ ಗುರಿಕಾರ, ಶಿವಸಂಗಪ್ಪ ಹಡಪದ, ರೇವಣಸಿದ್ದೇಶ್ವರ ಭಜನಾ ಮಂಡಳಿ, ಮಾರುತೇಶ್ವರ ಕಟ್ಟಡ ಕಾರ್ಮಿಕರ ಸಂಘಗಳ ಸದಸ್ಯರು ಸೇರಿದಂತೆ ಅನೇಕರು ಇದ್ದರು.
ಮುತ್ತಪ್ಪ ಬಿಂಗಿ ಸ್ವಾಗತಿಸಿದರು. ಭರಮಪ್ಪ ಕಂಡೇಕಾರ ಕಾರ್ಯಕ್ರಮ ನಿರೂಪಿಸಿದರು.