ಸಿಂಧನೂರು: ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿದ್ದು ಸೂಕ್ತ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ಅಭಿಪ್ರಾಯಪಟ್ಟರು.
ಅವರು ಸೋಮವಾರ ತಾಲ್ಲೂಕಿನ ಗಾಂಧಿನಗರ ಟಿ.ಟಿ.ಎಂ. ಶಾಲೆಯಲ್ಲಿ ದಿ. ವೀರುಪನಗೌಡ ಬಾದರ್ಲಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಅಂತರ್ಶಾಲಾ ಮಕ್ಕಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಬಡ್ಡಿ, ಕೊಕ್ಕೊ, ಓಟದ ಸ್ಪರ್ಧೆ ಮತ್ತಿತರ ಆಟಗಳು ಮಕ್ಕಳಲ್ಲಿ ದೈಹಿಕ ಸದೃಢತೆಯನ್ನು ಹೆಚ್ಚಿಸಿ, ಮಾನಸಿಕ ಸಮತೋಲನವನ್ನು ಕಾಪಾಡುತ್ತವೆ. ಇಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆಯುವಂತೆ ಕರೆ ನೀಡಿದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಲಿಂಗರಾಜ ಹಂಚಿನಾಳ ಸದೃಢ ದೇಹದಲ್ಲಿ ಸದೃಢ ಮನಸ್ಸು ಬೆಳೆಯುತ್ತದೆ ಎಂದರು. ಗೊರೇಬಾಳ ವಲಯ ಸಂಯೋಜಕ ಮಲ್ಲಿಕಾರ್ಜುನ ಮಾತನಾಡಿದರು. ಕ್ರೀಡಾಕೂಟ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಗಾಂಧಿನಗರದ ಪ್ರಮುಖ ಬೀದಿಗಳಲ್ಲಿ ಕ್ರೀಡಾಜ್ಯೋತಿಯೊಂದಿಗೆ ಪ್ರಭಾತ್ಫೇೇರಿ ನಡೆಸಲಾಯಿತು.
ತಾಲ್ಲೂಕು ಪಂಚಾಯಿತಿ ಸದಸ್ಯ ಸುಬ್ಬಾರಾವ್, ಗ್ರಾ.ಪಂ.ಮಾಜಿ ಅಧ್ಯಕ್ಷ ಗೋಪಿನಿಡಿಕೃಷ್ಣ, ಕಾಂಗ್ರೆಸ್ ಮುಖಂಡರಾದ ಲಿಂಗರಾಜ ಪಾಟೀಲ್, ಕನಕಪ್ಪ ನಾಯಕ, ಗ್ರಾ.ಪಂ.ಅಧ್ಯಕ್ಷೆ ಅಮೀನಾ ಬೇಗಂ, ಟಿ.ಟಿ.ಎಂ. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಪ್ರೇಮಾ ದೇವಕೃಪ, ಮುಳ್ಳುಪುಡಿ ವೆಂಕಟೇಶ್ವರರಾವ್, ಸಂಸ್ಥೆಯ ಕಾರ್ಯದರ್ಶಿ ಎನ್. ಸುಬ್ಬಾರಾವ್, ಬಾಬಾಗೌಡ ಬಾದರ್ಲಿ ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮಿದುರ್ಗಾ ಪ್ರಾರ್ಥಿಸಿದರು. ನರಸಮ್ಮ ಸಂಗಡಿಗರು ನಾಡಗೀತೆ ಹಾಡಿದರು.