ಕೆಂಗೇರಿ: ಹಳ್ಳಿಗಳಿಗೆ ಹೋಗಿ ಜನರ ಕಣ್ಣೀರನ್ನು ಒರೆಸಿ ಅವರ ಕಷ್ಟಗಳಿಗೆ ಸ್ಪಂದಿಸಿ ಒಳಿತನ್ನು ಮಾಡುವ ಮನೋಭಾವವನ್ನು ನಾವೆಲ್ಲ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಕೊ.ಚನ್ನಬಸಪ್ಪ ಕಿವಿಮಾತು ಹೇಳಿದರು.
ಮಾಗಡಿ ರಸ್ತೆಯ ಅಂಜನಾನಗರ ಸ್ಫೂರ್ತಿಧಾಮದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಭಾನುವಾರ ನಡೆದ ಅಂಬೇಡ್ಕರ್ ಹಬ್ಬದಲ್ಲಿ ಬೋಧಿವೃಕ್ಷ, ಬೋಧಿವರ್ಧನ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿ, ಅಂಬೇಡ್ಕರ್ ಅವರು ತಳಸಮುದಾಯದವರ ಬದುಕನ್ನು ಆಳವಾಗಿ ಅರಿತುಕೊಂಡಿದ್ದರಿಂದ ದೇಶಕ್ಕೆ ಅತ್ಯುತ್ತಮ ಸಂವಿಧಾನ ಕೊಡಲು ಸಾಧ್ಯವಾಯಿತು ಎಂದರು.
ಮನುಷ್ಯನ ಬಣ್ಣ, ರೂಪದಿಂದ ಅಳೆಯಲು ಸಾಧ್ಯವಿಲ್ಲ ಎಂಬುದನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಛಲ ಮತ್ತು ಹಠದಿಂದ ಮುನ್ನುಗ್ಗಿದ್ದರೆ ಯಾವುದೇ ಜಾತಿ ಮತ ಅಡ್ಡಬಂದರೂ ಸಾಧನೆ ಸಾಧ್ಯವಾಗುತ್ತದೆ ಎಂದರು. 2 ದಿನ ನಡೆದ ಅಂಬೇಡ್ಕರ್ ಹಬ್ಬದಲ್ಲಿ ತಳ ಸಮುದಾಯ ನಾಯಕರ ಸಮಾಗಮ, ಅಂಬೇಡ್ಕರ್ ಸ್ಮಾರಕ ಉಪನ್ಯಾಸ, ಸಂಗೀತ, ಜನಪದ ಗೀತೆ, ಭಾವಗೀತೆ, ಕುವೆಂಪು ಅವರ `ಜಲಾಗಾರ' ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.