ಯಳಂದೂರು: ಹಳೇ ಮೈಸೂರು ಭಾಗದಲ್ಲಿ ತಾಲ್ಲೂಕು ಮಟ್ಟದ ಗ್ರಾಮೀಣ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ. ಇದನ್ನು ಅರ್ಥಪೂರ್ಣವಾಗಿ ಆಚರಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಎಸ್. ಜಯಣ್ಣ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ದಸರಾ ಪ್ರಯುಕ್ತ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅ. 9ರಂದು ನಡೆಯುವ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಗ್ರಾಮೀಣ ಪರಂಪರೆಯನ್ನು ಬಿಂಬಿಸುವ ಕಲಾತಂಡಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಬೇಕು. ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಗಳು, ಪಟ್ಟಣದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಅಂದು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಎಲ್ಲಾ ಗ್ರಾಮ ಪಂಚಾಯಿತಿಯೂ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಈ ಉತ್ಸವದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸೆ. 30 ರಂದು ದೇಸಿ ಕ್ರೀಡೆಗಳನ್ನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಅ. 9 ರಂದು ನಡೆಯಲಿರುವ ಕಾರ್ಯಕ್ರಮವೂ ಇದೇ ಮೈದಾನದಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಂಗಾಮಣಿ ರೇವಣ್ಣ, ಉಪಾಧ್ಯಕ್ಷ ಮಹೇಶ್ಕುಮಾರ್ ಸದಸ್ಯರಾದ ಉಮಾವತಿ ಸಿದ್ಧರಾಜು, ಕೆ.ಪಿ. ಶಿವಣ್ಣ, ನಾಗೇಶ್, ಡಿ. ವೆಂಕಟಾಚಲ, ರಾಮಚಂದ್ರು ಪಟ್ಟಣ ಪಂಚಾಯಿತಿ ಸದಸ್ಯರಾದ ಉಮಾಶಂಕರ್, ನಿಂಗರಾಜು, ರವಿ ತಹಶೀಲ್ದಾರ್ ಶಿವರಾಮು, ಮುಖಂಡರಾದ ಗೌಡಹಳ್ಳಿ ಸೋಮಪ್ಪ, ಮಾಂಬಳ್ಳಿ ನಂಜುಂಡಸ್ವಾಮಿ, ಯರಗಂಬಳ್ಳಿ ಶಿವಣ್ಣ, ಶಾಂತರಾಜು, ಚಕ್ರವರ್ತಿ, ರೇವಣ್ಣ, ರಂಗನಾಥ, ಮಹೇಶ್, ವಜ್ರಮುನಿ, ಲಿಂಗರಾಜಮೂರ್ತಿ, ಎಚ್.ಎಂ. ಚಂದ್ರಶೇಖರ್ ಹಾಜರಿದ್ದರು.