ಶಿಕಾರಿಪುರ: ಪಟ್ಟಣ ಪ್ರದೇಶಕ್ಕಿಂತ ಹೆಚ್ಚಿನ ವಿದ್ಯುತ್ನ್ನು ಗ್ರಾಮೀಣ ಪ್ರದೇಶಕ್ಕೆ ನೀಡುವ ಮೂಲಕ ರೈತರ ಬೆಳೆಗಳ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ಮಾಜಿ ಸಚಿವ ಕೆ. ಯಂಕಟಪ್ಪ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಜನರು ಯುಪಿಎಸ್, ಸೋಲಾರ್ ಬಳಕೆ ಮೂಲಕ ಪರ್ಯಾಯ ವಿದ್ಯುತ್ ಬಳಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಕೃಷಿಗೆ ಅಗತ್ಯವಿರುವ ಕೊಳವೆಬಾವಿಗಳಿಗೆ ಇಂತಹ ಪರ್ಯಾಯ ಇಂಧನ ಬಳಕೆ ಸಾಧ್ಯವಿಲ್ಲದ ಕಾರಣ ಗ್ರಾಮೀಣ ಪ್ರದೇಶಕ್ಕೆ ಕನಿಷ್ಠ 8ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ತುಂಗಾನದಿಯಿಂದ ತಾಲ್ಲೂಕಿಗೆ ನೀರನ್ನು ತರುವ ಯೋಜನೆಗೆ ಮಂಜೂರಾತಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಎರಡು ಬಾರಿ ಪತ್ರ ಬರೆದು ಒತ್ತಾಯಿಸಿದರೂ ಕ್ರಮ ಕೈಗೊಂಡಿಲ್ಲ. ಈ ಮೂಲಕ ಇಲ್ಲಿನ ರೈತರ ಹಿತ ಕಾಯುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಂಜನಾಪುರ ಜಲಾಶಯ ಅಚ್ಚುಕಟ್ಟು ರೈತರಿಗೂ ನೀರನ್ನು ಕೊಡಲು ಆಗದೇ, ಕುಡಿಯುವ ನೀರನ್ನೂ ನೀಡಲು ಆಗದಂತಹ ಸ್ಥಿತಿ ನಿರ್ಮಾಣವಾಗುವುದಕ್ಕೂ ಮೊದಲೇ ಕ್ಷೇತ್ರದ ಶಾಸಕರು ಯೋಜನೆಗೆ ಚಾಲನೆ ನೀಡುವ ಕೆಲಸ ಮಾಡಬೇಕು ಇಲ್ಲವಾದಲ್ಲಿ ಹೋರಾಟದ ಮೂಲಕ ಇದನ್ನು ಪಡೆಯಲು ಮುಂದಾಗುತ್ತೇವೆ ಎಂದು ಅವರು ತಿಳಿಸಿದರು.