ಲಿಂಗಸುಗೂರ: ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಲಿಂಗ ಸುಗೂರ, ಮಸ್ಕಿ ಘಟಕಗಳ ಮೇಲು ಸ್ತುವಾರಿ ಮತ್ತು ನಿರ್ವಹಣೆ ಕೊರತೆ ಯಿಂದ ಬಸ್ಗಳ ದುರಾವಸ್ತೆ ಕೇಳು ವವರೆ ಇಲ್ಲದಾಗಿದೆ. ಪಟ್ಟಣ ಪ್ರದೇಶ ಗಳಿಗೆ ಹೆಚ್ಚಿನ ಬಸ್ ಓಡಿಸಿ ಲಾಭ ಮಾಡಿಕೊಳ್ಳುತ್ತಿರುವ ಘಟಕ ವ್ಯವ ಸ್ಥಾಪಕರು ಗ್ರಾಮೀಣ ಸಾರಿಗೆ ಹೆಚ್ಚಿಸಿ ಜನತೆಗೆ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿರುವ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಘಟಕಗಳಲ್ಲಿ ಬಸ್ ಗಳ ಮೇಲೆ ಪಟ್ಟಣ ಸಾರಿಗೆ ಮತ್ತು ಗ್ರಾಮೀಣ ಸಾರಿಗೆ ಎಂದು ವಿಭಾಗಿಸಿ ಬರೆಸುವುದು ಕಡ್ಡಾಯ. ಆದರೆ, ಮಸ್ಕಿ ಮತ್ತು ಲಿಂಗಸುಗೂರ ಘಟಕಗಳಲ್ಲಿ ಆ ರೀತಿ ಬರೆಸಿದ ಒಂದು ಬಸ್ ಕೂಡ ಕಾಣಸಿಗುವುದಿಲ್ಲ. ಬರೆಯಿಸುವುದು ಒಂದಡೆ ಇರಲಿ, ಗ್ರಾಮೀಣ ಪ್ರದೇಶಗಳಿಗೆ ಓಡಿಸುವ ಬಸ್ಗಳನ್ನು ನೋಡಿದರೆ ಗಬ್ಬೆದ್ದು ನಾರುವ, ಧೂಳು ಮುಚ್ಚಿದ ಸೀಟುಗಳ ಮೇಲೆ ಕುಳಿತುಕೊಳ್ಳಲು ನಾಚಿಕೆ ಬರುತ್ತದೆ.
ಬಸ್ನ ಬಹುತೇಕ ಕಿಟಕಿ ಗಾಜುಗಳು ಬಿಚ್ಚಿ ಹೋಗಿವೆ. ಕಿಟಕಿ ರಕ್ಷಣೆಗಾಗಿ ಹಾಕುವ ಉದ್ದನೆ ಪೈಪ್ಗಳು ಮಂಗಮಾಯವಾಗಿವೆ. ಬಸ್ ಸ್ಟೀಲ್ ಬಾಡಿಯ ತಗಡು ಕಿತ್ತಿ ಅಕ್ಕ ಪಕ್ಕದ ವಾಹನ ಸವಾರರನ್ನು ತಟ್ಟುತ್ತಿವೆ. ವಾಹನ ಸ್ವಚ್ಛಗೊಳಿಸಲು ಖಾಸಗಿ ಟೆಂಡರ್ ನೀಡಿದ್ದರೂ ಸ್ವಚ್ಛತೆ ಮಾಡುವಂತೆ ಹೇಳುವವರೆ ಇಲ್ಲದಾಗಿದೆ. ಎಷ್ಟೋ ಬಾರಿ ಟೈರ್ಗಳಿಗೆ ಬೋಲ್ಟ್ ಹಚ್ಚದೆ ರಸ್ತೆಗೆ ಇಳಿದು ಅವಘಡ ಸಂಭವಿಸಿದ ನೂರೆಂಟು ಉದಾಹರಣೆಗಳು ಕಾಣಸಿಗುತ್ತವೆ.
ಸಾರಿಗೆ ಸಂಸ್ಥೆ ಮೇಲಿಂದ ಮೇಲೆ ನಿಗದಿಪಡಿಸಿದ ಬಸ್ ದರ ಪಾವತಿಸುತ್ತೇವೆ. ಆದರೆ, ಸುಸಜ್ಜಿತ, ಸಕಲ ಸೌಲಭ್ಯದ, ಸ್ವಚ್ಛವಾದ ಹಾಗೂ ಗ್ರಾಮಕ್ಕೆ ಗ್ಯಾರೆಂಟಿ ತಲುಪುತ್ತೆ ಎಂಬ ಭರವಸೆಗಳ ಬಸ್ ಕೊರತೆಯಿಂದ ಸಾಕಾಗಿ ಹೋಗಿದೆ. ಎಷ್ಟು ಬಾರಿ ಖಾಸಗಿ ವಾಹನಗಳನ್ನೆ ನಂಬಿ ಪಟ್ಟಣಕ್ಕೆ ಬರುವಂತಾಗಿದೆ ಎಂದು ಚಿತ್ರನಾಳದ ಮಹಾಂತಪ್ಪ, ಪರಾಂಪುರದ ಅಮರಪ್ಪ, ನಂದಿಹಾಳದ ಹುಲಗಪ್ಪ ಮತ್ತಿತರು ಹಿಡಿಶಾಪ ಹಾಕಿದ್ದಾರೆ.