ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ರಸ್ತೆಗೆ ₨1,033 ಕೋಟಿ

3 ವರ್ಷ ಬಳಿಕ ಕೇಂದ್ರದ ಅನುದಾನ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಮೂರು ವರ್ಷ­ಗಳ ಬಳಿಕ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ­ಯಡಿ (ಪಿಎಂಜಿಎಸ್‌ವೈ) ರಾಜ್ಯಕ್ಕೆ ಅನುದಾನ ನೀಡಲು ಸಮ್ಮತಿಸಿದೆ. ರಾಜ್ಯದ 2,245 ಕಿ.ಮೀ ಗ್ರಾಮೀಣ ರಸ್ತೆಗಳನ್ನು ₨1,033 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಹಸಿರು ನಿಶಾನೆ ಸಿಕ್ಕಿದೆ.

ಈ ವಿಷಯವನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಾವ ರಸ್ತೆಗಳನ್ನು ಅಭಿವೃದ್ಧಿಪಡಿಸ­ಬೇಕು ಎನ್ನುವುದನ್ನು ಗುರುತಿಸಲಾಗಿದೆ. ಒಂಬತ್ತು ತಿಂಗಳಲ್ಲಿ  ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ. ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶ ಎಂದರು.

ಶಾಸಕರ ಸಲಹೆಗೆ ಮಾನ್ಯತೆ: ಗುಣಮಟ್ಟದ ವಿಷಯದಲ್ಲಿ ರಾಜಿ ಇಲ್ಲ. ಶಾಸಕರ ಸಲಹೆ ಮತ್ತು ಸ್ಥಳೀಯ ಅಗತ್ಯವನ್ನು ಪರಿಗಣಿಸಿ, ರಸ್ತೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿ ಮುಗಿದ ನಂತರ ಅವುಗಳನ್ನು ಜಿಲ್ಲಾ ಮುಖ್ಯ ರಸ್ತೆಗಳ­ನ್ನಾಗಿ ಮೇಲ್ದರ್ಜೆಗೇರಿಸಲಾ­ಗುವುದು ಎಂದು ಅವರು ಹೇಳಿದರು.

ಪಿಎಂಜಿಎಸ್‌ವೈ ಯೋಜನೆಯ ರಸ್ತೆಗಳಿಗೆ ಶೇ 75ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದರೆ, ಉಳಿದ ಶೇ 25ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ .

ಮರಳುಗಾಡು ಅಭಿವೃದ್ಧಿ ಯೋಜನೆಯಡಿ 250ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 16 ಜನವಸತಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲು ₨ 21.71 ಕೋಟಿ ವೆಚ್ಚದಲ್ಲಿ 48.38 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ಅವರು ಹೇಳಿದರು. 500ಕ್ಕಿಂತ ಹೆಚ್ಚು ಜನಸಂಖ್ಯೆಯ 12 ಜನವಸತಿಗಳಿಗೆ 43.86 ಕಿ.ಮೀ ಉದ್ದದ ರಸ್ತೆ ಸಂಪರ್ಕ ಕಲ್ಪಿಸಲು ₨ 18.58 ಕೋಟಿ ಬಿಡುಗಡೆ ಮಾಡಿದೆ ಎಂದರು.

ಪಿಎಂಜಿಎಸ್‌ವೈ ಅಡಿ ಇದುವರೆಗೂ 10 ಹಂತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಮಂಜೂರಾತಿ ಸಿಕ್ಕಿದ್ದ 16,267 ಕಿ.ಮೀ ರಸ್ತೆಯಲ್ಲಿ 16,058 ಕಿ.ಮೀ ಅಭಿವೃದ್ಧಿಪಡಿಸಲಾಗಿದೆ. ಒಟ್ಟು ₨ 3,642 ಕೋಟಿ ವೆಚ್ಚವಾಗಿದೆ ಎಂದರು.

ಹಳ್ಳಿ ರಸ್ತೆ ದುರಸ್ತಿ
ಗ್ರಾಮೀಣ ಭಾಗದಲ್ಲಿ 1.55 ಲಕ್ಷ ಕಿ.ಮೀ. ಉದ್ದದ ರಸ್ತೆಗಳಿದ್ದು, ಅವುಗಳ ದುರಸ್ತಿಗೆ ರಾಜ್ಯ ಸರ್ಕಾರ ₨ 109 ಕೋಟಿ ಬಿಡುಗಡೆ ಮಾಡಿದೆ. ಶಾಸಕರ ಅಧ್ಯಕ್ಷತೆಯ ಕಾರ್ಯಪಡೆ ರಸ್ತೆಗಳನ್ನು ಆಯ್ಕೆ ಮಾಡಲಿದೆ.

ಒಂದು ಕಿ.ಮೀ ಮಣ್ಣಿನ ರಸ್ತೆ ದುರಸ್ತಿಗೆ ₨ 5,000, ಜಲ್ಲಿ ರಸ್ತೆಗೆ ₨6,000 ಮತ್ತು ಡಾಂಬರು ರಸ್ತೆಗೆ ₨ 10 ಸಾವಿರ ನೀಡಲು ಅವಕಾಶ ಇದೆ. ಈ ಹಣದಲ್ಲೇ ರಸ್ತೆಗಳಲ್ಲಿನ ಗುಂಡಿ ಮುಚ್ಚುವುದಕ್ಕೂ ಬಳಕೆ ಮಾಡಿಕೊಳ್ಳಬಹುದು. ಪ್ರತಿ ಒಂದು ವಿಧಾನಸಭಾ ಕ್ಷೇತ್ರಕ್ಕೆ ಸರಾಸರಿ ₨ 55 ರಿಂದ 60 ಲಕ್ಷ ಲಭ್ಯವಾಗಲಿದೆ ಎಂದು ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT