ಬಳ್ಳಾರಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಜನ್ಮ ದಿನದ ಅಂಗವಾಗಿ ನಗರದ ಬಚಪನ್ ಶಾಲೆಯ ವಿದ್ಯಾರ್ಥಿಗಳು ಗಾಂಧೀಜಿ ಅವರ ವೇಷಧರಿಸಿ ಭಾನುವಾರ ಗಾಂಧಿ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರಲ್ಲದೆ, ಶೈಕ್ಷಣಿಕ ಉದ್ಯಾನ ಸ್ಥಾಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಶಾಲೆಯ 3ರಿಂದ 5 ವರ್ಷ ದೊಳಗಿನ ನೂರಾರು ವಿದ್ಯಾರ್ಥಿಗಳು, ಶ್ವೇತ ವಸ್ತ್ರಧಾರಿಗಳಾಗಿ, ತಲೆಗೆ ಟೊಪ್ಪಿ, ಮೈಮೇಲೆ ವಸ್ತ್ರ ಧರಿಸಿ, ಪಂಚೆ ತೊಟ್ಟು. ಕನ್ನಡಕ ಹಾಕಿಕೊಂಡು, ಕೈಯಲ್ಲಿ ಕೋಲು ಹಿಡಿದು ಗಾಂಧೀಜಿ ವೇಷದಲ್ಲಿ ಕಂಗೊಳಿಸಿದರು.
ಶಿಕ್ಷಕರೊಂದಿಗೆ ಅತ್ಯಂತ ಶಿಸ್ತಿನಿಂದ ಮೆರವಣಿಗೆಯಲ್ಲಿ ಭಾಗವಹಿಸಿ, ಸಾರ್ವಜನಿಕರನ್ನು ಆಕರ್ಷಿಸಿದ ವಿದ್ಯಾರ್ಥಿಗಳು, ಜಿಲ್ಲಾಧಿಕಾರಿ ಕಚೇರಿ ತಲುಪಿ ಶಾಲೆಯ ಮುಖ್ಯಸ್ಥರು ಸಿದ್ಧಪಡಿಸಿದ್ದ ಮನವಿಯನ್ನು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರಿಗೆ ನೀಡಿದರು.
ಮಕ್ಕಳಿಂದ ಮನವಿ ಸ್ವೀಕರಿಸಿದ ಬಿಸ್ವಾಸ್, ಶೀಘ್ರವೇ ಶೈಕ್ಷಣಿಕ ಉದ್ಯಾನ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.ಮಕ್ಕಳಿಗೆ ಚಿಕ್ಕಂದಿನಲ್ಲೇ ದೇಶಭಕ್ತಿ, ಅಹಿಂಸೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಮೆರವಣಿಗೆ ಏರ್ಪಡಿಸಲಾಗಿದ್ದು, ನಗರದಲ್ಲಿರುವ ಅನೇಕ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೈಕ್ಷಣಿಕ ಉದ್ಯಾನವನದ ಅಗತ್ಯವಿದೆ ಎಂದು ಶಿಕ್ಷಕರು ತಿಳಿಸಿದರು.
ಉರ್ದು ತಾಲಿಮಿ ಮೇಳ
ಹಗರಿಬೊಮ್ಮನಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಸೂಕ್ತ ಶೈಕ್ಷಣಿಕ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ಮತೀಯ ಅಲ್ಪಸಂಖ್ಯಾತರ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದು ಎಪಿಎಂಸಿ ನಿರ್ದೇಶಕ ಜಿ. ಶಿವಕುಮಾರಗೌಡ ಒತ್ತಾಯಿಸಿದರು.
ತಾಲ್ಲೂಕಿನ ಹನಸಿ ಗ್ರಾಮದಲ್ಲಿ ಇತ್ತೀಚೆಗೆ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲ್ಲೂಕು ಉರ್ದು ತಾಲಿಮಿ ಮೇಲದಲ್ಲಿ ಮಾತನಾಡಿ ರಾಜ್ಯದ 18 ತಾಲ್ಲೂಕು ಕೇಂದ್ರಗಳಲ್ಲಿ ಉರ್ದು ಪ್ರೌಢಶಾಲೆಗಳ ಕೊರತೆ ಇದೆ ಎಂದು ಖೇದ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತ ಸಮುದಾಯ ಶೈಕ್ಷಣಿಕವಾಗಿ ಅತಂತ್ರಗೊಂಡಿದೆ, ಸಮುದಾಯದ ಅರ್ಧದಷ್ಟು ಬಾಲಕಿ ಯರು ಪ್ರೌಢಶಾಲೆಯ ಹಂತದಲ್ಲಿ ಶಿಕ್ಷಣದಿಂದ ವಿಮುಖ ರಾಗುತ್ತಿದ್ದು ಸಾಕ್ಷರತೆ ಪ್ರಮಾಣ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗೌಡ ಮಾತನಾಡಿ, ತಾಲ್ಲೂಕಿನ 9 ಉರ್ದು ಪ್ರಾಥಮಿಕ ಮತ್ತು 2 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 320 ವಿದ್ಯಾರ್ಥಿಗಳಿದ್ದಾರೆ. ಪಟ್ಟಣದ ಜಾಲಿನಗರದ ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ಶಿವಕುಮಾರ್ ಬೆಲ್ಲದ್ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಿ.ಟಿ. ತೇನಸಿಂಗ ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಶರೀಫ್ಸಾಬ್ ಹಾಗೂ ಮೆಹಬೂಬ ಬಾಷಾ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಡಿ. ಖಾಸೀಂ ಪೀರ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಕೆ.ವಿ.ಎಂ. ನಾಗಭೂಷಣ ಮತ್ತು ತಾಲ್ಲೂಕು ಶಿಕ್ಷಕ ಸಂಘದ ಉಪಾಧ್ಯಕ್ಷ ಶಂಭುಲಿಂಗಪ್ಪ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಕೊಟ್ರೇಶ್, ಶಿಕ್ಷಣ ಸಂಯೋಜಕ ಕೆ.ಕೊಟ್ರೇಶಪ್ಪ ಮತ್ತು ಶಿಕ್ಷಕ ಬಸವರಾಜ್ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.