ವಿಜಯಪುರ: ಕೇಂದ್ರ ಸರ್ಕಾರ ಪ್ರಾಥಮಿಕ ಶಿಕ್ಷಣ ಪಡೆದ ಗ್ರಾಮೀಣ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಹಲವು ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾಜಿ ಸಂಸದ ಸಿ. ನಾರಾಯಣಸ್ವಾಮಿ ಹೇಳಿದರು.
ಸಮೀಪದ ಬಳುವನಹಳ್ಳಿ ಗೇಟ್ ಬಳಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶ್ಯಾಮಲ ಹೊಲಿಗೆ ತರಬೇತಿ ಮತ್ತು ಸಿದ್ಧ ಉಡುಪು ತಯಾರಿಕಾ ಘಟಕ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಹೆಣ್ಣು ಮಕ್ಕಳು ಸ್ವ ಉದ್ಯೋಗ ತರಬೇತಿ ಪಡೆದು ಸ್ವಾವಲಂಬಿಗಳಾಗಬೇಕು ಎಂದರು.
ಮಾಜಿ ಶಾಸಕ ಜಿ.ಚಂದ್ರಣ್ಣ, ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ ಕೊಡಿಸಿ, ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹಿಸಬೇಕು ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್. ರಾಜಣ್ಣ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ದುಬಾರಿಯಾಗಿದ್ದು, ಹೊಲಿಗೆ ತರಬೇತಿ ಹೆಣ್ಣು ಮಕ್ಕಳು, ಆರ್ಥಿಕವಾಗಿ ಸಬಲರಾಗಲು ಸಹಾಯಕವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಪ್ರೋಸಲ್ಯೂಶನ್ಸ್ ಕಂಪೆನಿ ನಿರ್ದೇಶಕ ಜಿ. ಎಚ್. ಸೋಮಶೇಖರ್, ಬಡತನ ರೇಖೆಗಿಂತ ಕೆಳಗಿರುವ 7 ನೇ ತರಗತಿ ಉತ್ತೀರ್ಣ ಇಲ್ಲವೇ ಅನುತ್ತೀರ್ಣರಾದ 18 ರಿಂದ 25 ವರ್ಷದ ಒಳಗಿನ ಗ್ರಾಮೀಣ ಯುವತಿಯರಿಗೆ 30 ದಿನಗಳ ಉಚಿತ ತರಬೇತಿ ನೀಡಲಾಗುವುದು. ತರಬೇತಿ ನಂತರ ಉದ್ಯೋಗವಕಾಶವನ್ನು ನೀಡಲಾಗುವುದು.
ತರಬೇತಿಯ ಸಮಯದಲ್ಲಿ ಉಚಿತ ಊಟದ ವ್ಯವಸ್ಥೆ ಹಾಗೂ ಅಗತ್ಯವಿದ್ದಲ್ಲಿ ವಸತಿ ಸೌಲಭ್ಯ ಒದಗಿಸಲಾಗುವುದು. ಬಿಪಿಎಲ್ ಪಡಿತರ ಚೀಟಿ, ಭಾವಚಿತ್ರ, ವಯಸ್ಸು ಮತ್ತು ವಿದ್ಯಾರ್ಹತೆ ದೃಢೀಕರಣ ಪತ್ರ, ವಿಳಾಸ ದೃಢೀಕರಣ, ಮತದಾನದ ಗುರುತಿನ ಚೀಟಿ, ಇವುಗಳ ಜೆರಾಕ್ಸ್ ಪ್ರತಿಗಳೊಂದಿಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಎಂದರು.
ಸಂಸ್ಥೆ ಗೌರವಾಧ್ಯಕ್ಷ ಎನ್.ಎಂ.ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರೋಸಲ್ಯೂಶನ್ಸ್ ಕಂಪೆನಿ ಅಧ್ಯಕ್ಷ ಎನ್. ಚಂದ್ರಶೇಖರ್, ದೇವನಹಳ್ಳಿ ಪಿಎಲ್ಡಿ. ಬ್ಯಾಂಕ್ ಅಧ್ಯಕ್ಷ ಶ್ರಿರಾಮಯ್ಯ, ತಾಲ್ಲೂಕು ಕಸಾಪ. ಅಧ್ಯಕ್ಷ ನಾರಾಯಣಸ್ವಾಮಿ, ಜೆಡಿಎಸ್ ಅಧ್ಯಕ್ಷ ಬೂದಿಹಾಳ್ ಮುನಿಶ್ಯಾಮಗೌಡ, ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ನರೇಂದ್ರ, ತಾ.ಪಂ. ಅಧ್ಯಕ್ಷ ಬಿ.ಕೆ.ಶಿವಪ್ಪ, ಚಿಕ್ಕಬಳ್ಳಾಪುರ ಜಿ.ಪಂ. ಸದಸ್ಯರಾದ ಶಿವಲೀಲಾ ರಾಜಣ್ಣ, ಚನ್ನರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷರಾದ ಪದ್ಮಾವತಿ ಮೂರ್ತಿ, ವ್ಯವಸ್ಥಾಪಕ ಎನ್.ಎ. ರವಿಗೋಪಾಲ್, ಶ್ಯಾಮಲಾ ರವಿಗೋಪಾಲ್, ಆದರ್ಶ ರವಿಗೋಪಾಲ್ ಮತ್ತು ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.