ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣರಲ್ಲೂ ಸಂಸ್ಕೃತಿ, ಆಚಾರ ವಿಚಾರ ಮರೆ

Last Updated 2 ಅಕ್ಟೋಬರ್ 2012, 5:10 IST
ಅಕ್ಷರ ಗಾತ್ರ

ಬ್ಯಾಡಗಿ: ಆಧುನಿಕತೆಗೆ ಮಾರು ಹೋಗಿರುವ ಗ್ರಾಮೀಣ ಜನತೆ ಭಾರತೀಯ ಸಂಸ್ಕೃತಿ, ಪರಂಪರೆ,ಆಚಾರ ವಿಚಾರಗಳನ್ನು ಮರೆಯುತ್ತಿದ್ದಾರೆ ಎಂದು ಮಣಕೂರು ಹಾಲಸ್ವಾಮಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಇತ್ತೀಚೆಗೆ ತಾಲ್ಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಡಾ. ಪುಟ್ಟರಾಜರ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಈ ಗ್ರಾಮಕ್ಕೆ ಡಾ.ಪುಟ್ಟರಾಜ  ಗವಾಯಿಗಳು ವರ್ಷಕ್ಕೊಮ್ಮೆ ಭೇಟಿ ನೀಡಿ ಜನರಿಗೆ ಉತ್ತಮ ಸಂಸ್ಕಾರ ನೀಡಿದ್ದರ ಸವಿನೆನಪಿಗೆ ರೂ.10ಲಕ್ಷ ವೆಚ್ಚದ ಗವಾಯಿಗಳ ಮಠ ಹಾಗೂ ಅವರ ಪುತ್ಥಳಿ ಸ್ಥಾಪಿಸಲು ನಿರ್ಧರಿಸಿರುವುದು ಶ್ಲಾಘನೀಯ. ಗುರು ಪರಂಪರೆಯಲ್ಲಿ ಬಾಳಿದಾಗಲೇ ಜೀವನ ಪಾವನವಾಗಲು ಸಾಧ್ಯ ಎಂದರು.

ಜಿ.ಪಂ. ಸದಸ್ಯ ಎಸ್.ಎನ್. ಮಾತನವರ, ಎಪಿಎಂಸಿ ಮಾಜಿ ಸದಸ್ಯ ಚನ್ನವೀರನಗೌಡ ಬುಡ್ಡನಗೌಡ್ರ, ಗ್ರಾಮದ ಮುಖಂಡರಾದ ಪಂಚಾಕ್ಷರಯ್ಯ ಹಿರೇಮಠ, ಪರಮೇಶ್ವರಯ್ಯ ಮಠದ, ಎಸ್.ವಿ. ಶಿಡೇನೂರ, ಆರ್. ಎ. ಬ್ಯಾಡಗಿ, ಎಸ್.ಎನ್. ಶಿಡೇನೂರ, ಸಿ.ಕೆ. ಬ್ಯಾಡಗಿ, ಎಚ್.ಎಸ್. ಅರಳಿಕಟ್ಟಿ, ಡಿ.ವಿ. ಹಿರೇಮಠ, ಎಂ.ಎಂ. ಶಿಡೇನೂರ ಉಪಸ್ಥಿತರಿದ್ದರು. ಗದುಗಿನ ಪುಟ್ಟರಾಜರ ಗವಾಯಿಗಳ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಸಿದ್ದಯ್ಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಪೂರ್ಣಕುಂಭ: ಕಾರ್ಯಕ್ರಮಕ್ಕೂ ಮೊದಲು ನೂರಾರು ಸುಮಂಗಲೆಯರ ಪೂರ್ಣ ಕುಂಭಗಳೊಂದಿಗೆ ಡಾ. ಪುಟ್ಟರಾಜ ಕವಿ ಗವಾಯಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ವೀರೇಶ್ವರ ಪೂರ್ಣಾಶ್ರಮದ ಶರಣಕುಮಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎ.ಬಿ. ಪರಮೇಶ್ವರಪ್ಪ ಸ್ವಾಗತಿಸಿದರು. ಪ್ರಭು ಶಿಡೇನೂರ ನಿರ್ವಹಿಸಿದರು. ರಾಜು ಬ್ಯಾಡಗಿ ವಂದಿಸಿದರು.

ಸ್ವರ ಶ್ರದ್ಧಾಂಜಲಿ
ಮಾರನಬೀಡ (ಅಕ್ಕಿಆಲೂರ)ವರದಿ:  ನಡೆದಾಡುವ ದೇವರೆಂದು ಖ್ಯಾತಿ ಹೊಂದಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಡಾ. ಪುಟ್ಟರಾಜ ಗವಾಯಿಗಳು ಸಮಾಜಕ್ಕೆ ಸ್ಫೂರ್ತಿ. ಅವರ ಆದರ್ಶ, ಮೌಲ್ಯಅಳವಡಿಸಿಕೊಳ್ಳಲು ಯತ್ನಿಸಬೇಕು ಎಂದು ಹೋತನಹಳ್ಳಿಯ ಸಿದ್ಧಾರೂಢ ಮಠದ ಶಂಕರಾನಂದ ಶ್ರೀಗಳು ಹೇಳಿದರು.

ಅಕ್ಕಿಆಲೂರ ಬಳಿಯ ಮಾರನಬೀಡದಲ್ಲಿ ಕನ್ನಡ ಮತ್ತ ಸಂಸ್ಕೃತಿ ಇಲಾಖೆ, ಕಂಚಿನೆಗಳೂರಿನ ಲಿಂ.ಬಸವಣ್ಣೆಯ್ಯ ಶ್ರೀಗಳ ಸಾಂಸ್ಕೃತಿಕ- ಸಾಹಿತ್ಯಿಕ ಸಂಘ ಹಾಗೂ ಕಲ್ಮೇಶ್ವರ ಭಜನಾ ಸಂಘದ ಸಹಯೋಗದಲ್ಲಿ ಡಾ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಸ್ವರ ಶ್ರದ್ಧಾಂಜಲಿ ಹಾಗೂ ಸಂಗೀತೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ತಾ. ಪಂ. ಸದಸ್ಯ ಸುರೇಶ ನೆರ್ಕಿಮನಿ, ಶುದ್ಧ ಕಾಯಕದಿಂದ ಮಾತ್ರ ಸಮೃದ್ಧ ನಾಡು  ಸಾಧ್ಯ.

ಅಧ್ಯಕ್ಷತೆ ವಹಿಸಿದ್ದ ಷಣ್ಮುಖಯ್ಯ ಹಿರೇಮಠ, ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗವಾಯಿಗಳಿಗೆ ನಿಜವಾದ ಅರ್ಥದಲ್ಲಿ ಶ್ರದ್ಧಾಂಜಲಿ ಸ್ಲ್ಲಲಬೇಕಿದೆ ಎಂದರು.

ನಿವೃತ್ತ ಶಿಕ್ಷಕ ಎಸ್. ಎಸ್. ಮೂರಮಟ್ಟಿ, ಗ್ರಾ.ಪಂ. ಅಧ್ಯಕ್ಷ ಬಸವರಾಜ್ ಹಾದಿ, ಜಗದೀಶ ಮಡಿವಾಳರ, ಅಡವೀಶ ಬೆಳಗಾವಿ ಅತಿಥಿಗಳಾಗಿದ್ದರು. ನಿರಂಜನ ಅಡಿಗ ಮತ್ತು ನಿಧಿ ಅಡಿಗ ಸುಗಮ ಸಂಗೀತ, ಸೋಮಯ್ಯ ಗವಾಯಿ ಮತ್ತು ಮಲ್ಲಿಕಾರ್ಜುನ ಗೊಜನೂರ ಪ್ರಸ್ತುತ ಪಡಿಸಿದ ಶಾಸ್ತ್ರೀಯ ಸಂಗೀತ ಮನಸೂರೆಗೊಂಡಿತು. ಬಳಿಕ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT