ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗ್ರಾಮೀಣರಿಗೆ `ಆಧಾರ್' ಅತ್ಯುಪಯುಕ್ತ'

Last Updated 2 ಸೆಪ್ಟೆಂಬರ್ 2013, 19:46 IST
ಅಕ್ಷರ ಗಾತ್ರ

ಬೆಂಗಳೂರು:  ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಅನಕ್ಷರಸ್ಥರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವಿಶೇಷ ಗುರುತು ಸಂಖ್ಯೆ (ಆಧಾರ್) ಬಹಳಷ್ಟು ಸಹಾಯಕವಾಗಲಿದೆ ಎಂದು ಮನಿಲಾದ `ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್'ನ ಮಾಜಿ ಮುಖ್ಯಸ್ಥ ವಿ.ಎಸ್.ರಾವ್ ಅಭಿಪ್ರಾಯಪಟ್ಟರು.

ಬೆಂಗಳೂರು ಸಾಮಾಜಿಕ ವಿಜ್ಞಾನ ವೇದಿಕೆಯು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಆಧಾರ್‌ನ ಉಪಯೋಗಗಳು ?' ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪ್ರಸ್ತುತ ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆ ತೆರೆಯಲು ಅಥವಾ ಪಡಿತರ ಚೀಟಿ ಪಡೆಯಲು ಯಾರೇ ಹೋದರೂ ಅವರಿಂದ ಗುರುತನ್ನು ಧೃಡಪಡಿಸುವ ದಾಖಲಾತಿಗಳನ್ನು ಕೇಳಲಾಗುತ್ತದೆ. ನಗರ ವಾಸಿಗಳು ಸುಲಭವಾಗಿ ದಾಖಲೆಗಳನ್ನು ನೀಡುತ್ತಾರೆ. ಆದರೆ ಗ್ರಾಮೀಣ ಪ್ರದೇಶದವರು ಹಾಗೂ ಅನಕ್ಷರಸ್ಥರ ಬಳಿ ಯಾವ ದಾಖಲೆಗಳೂ ಇರುವುದಿಲ್ಲ. ಇದರಿಂದಾಗಿ ಅವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆಧಾರ್ ಬಹಳಷ್ಟು ಉಪಯುಕ್ತವಾಗಲಿದೆ ಎಂದರು.

ನ್ಯಾಷನಲ್ ಕಾಲೇಜಿನ ಉಪನ್ಯಾಸಕ ಬಿ.ಎನ್.ವೇಣುಗೋಪಾಲ್ ಮಾತನಾಡಿ, ಆಧಾರ್ ಸಂಖ್ಯೆ ನೀಡುವ ಕಾರ್ಯ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಜೊತೆಗೆ ಆಧಾರ್ ಸಂಖ್ಯೆ ಪಡೆಯುವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಪಡೆಯಲಾಗುತ್ತದೆ. ಖಾಸಗಿ ಸಂಸ್ಥೆಯ ಹಸ್ತಕ್ಷೇಪ ಇರುವಲ್ಲಿ ಈ ಮಾಹಿತಿ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಯೋಜನೆಯನ್ನು ರೂ 18 ಸಾವಿರ ಕೋಟಿ ವೆಚ್ಚದಲ್ಲಿ ಪ್ರಾರಂಭಿಸಿದ್ದು, 9 ರಿಂದ 10 ಲಕ್ಷ ಜನರಿಗೆ ಮಾತ್ರ ಉದ್ಯೋಗ ದೊರೆಯಲಿದೆ. ಇದರಿಂದಾಗಿ ಕೇವಲ ರೂ 16,500 ಕೋಟಿ ಆದಾಯ ಬರಲಿದೆ. ದೇಶದ ಪ್ರಸ್ತುತ ಆರ್ಥಿಕ ವ್ಯವಸ್ಥೆಯಲ್ಲಿ ಇದರ ಅಗತ್ಯ ಇದೆಯಾ? ಅಲ್ಲದೆ ಈ ಹಣದಲ್ಲಿ ಎಷ್ಟು ಭಾಗ ವಾಸ್ತವದಲ್ಲಿ ಯೋಜನೆಗೆ ಬಳಸಲಾಗುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು.

ವೇಣುಗೋಲಾಪ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾರ್ವಜನಿಕರೊಬ್ಬರು ಸರ್ಕಾರದ ಯೋಜನೆಗಳನ್ನು ಕೇವಲ ಅನುಮಾನದಿಂದ ನೋಡುವುದು ಸರಿಯಲ್ಲ. ಇದರಿಂದ ಹಲವರಿಗೆ ಉಪಯೋಗವಾಗಲಿದೆ. ಒಂದು ವೇಳೆ ಯೋಜನೆಯ ಹಣ ದುರುಪಯೋಗವಾಗಿದ್ದಲ್ಲಿ ಅಂಕಿಂಶಗಳೊಂದಿಗೆ ವಿವರಿಸಿ, ಆಗ ಅದನ್ನು ಒಪ್ಪಿಕೊಳ್ಳೋಣ ಎಂದು ಖಾರವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT