ಗೌರಿಬಿದನೂರು:ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ. ಬದಲಾವಣೆಗೆ ತಕ್ಕಂತೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು ಎಂದು ಎಸಿಸಿ ಕಾರ್ಖಾನೆ ವ್ಯವಸ್ಥಾಪಕ ರಾಜೀವ್ ತಿಳಿಸಿದರು.
ತಾಲ್ಲೂಕಿನ ತೊಂಡೇಬಾವಿ ಸ್ವಾಮಿ ಶಿವಾನಂದ ಪ್ರೌಢಶಾಲೆಗೆ ಎಸಿಸಿ ಕಾರ್ಖಾನೆ 4.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಂಪ್ಯೂಟರ್ ಇ-ತರಬೇತಿ ಕೊಠಡಿಗಳನ್ನು ಶಾಲೆಯ ಆಡಳಿತ ಮಂಡಳಿಗೆ ಗುರುವಾರ ಹಸ್ತಾಂತರಿಸಿ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಸತ್ಪ್ರಜೆಗಳಾಗಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕ ಮೀರ್ ಅಸೀಫ್ ಹುಸೇನ್ ಎಸಿಸಿ ಕಾರ್ಖಾನೆಗೆ ಕೃತಜ್ಞತೆ ಸಲ್ಲಿಸಿದರು. ಎಸಿಸಿ ಹಾಗೂ ಎಸ್ಇಎಆರ್ಡಿಎಸ್ ಸಂಸ್ಥೆಗಳ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಎಲೆಕ್ಟ್ರಿಷಿಯನ್ ಟೂಲ್ ಕಿಟ್ ಉಚಿತವಾಗಿ ನೀಡಲಾಯಿತು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬ್ರಹ್ಮರಾಜ್, ಕಾರ್ಖಾನೆಯ ಸಿಬ್ಬಂದಿ ಎನ್.ಜಿ. ಸುಂದರ್ರಾಜ್, ರಾಮು, ಮೊಹಮದ್ ಖಾಜಾ, ಮನೋಜ್ಕುಮಾರ ವಂಶಿ, ರಷೀದ್, ನಜೀರ್, ಎಸ್ಟಿಡಿ ರಾಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.