ಬೆಳಗಾವಿ: ಗ್ರಾಮೀಣ ಅಭಿವೃದ್ಧಿಗೆ ಸರಕಾರ ಯೋಜನೆ ಹಾಗೂ ಯೋಜನೇತರ ಅನುದಾನ ಬಿಡುಗಡೆ ಮಾಡುತ್ತಲಿದ್ದು, ಗ್ರಾಮೀಣ ಜನತೆಗೆ ತಲುಪಿಸುವ ವ್ಯವಸ್ಥೆಯನ್ನು ಗ್ರಾಮೀಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾಡಬೇಕು ಎಂದು ಬೆಳಗಾವಿ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷ ಈರಪ್ಪ ಭೀಮಪ್ಪ ಕಡಾಡಿ ಶುಕ್ರವಾರ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಬೆಳಗಾವಿ ಇವರ ವತಿಯಿಂದ 5 ತಾಲ್ಲೂಕಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು ಮಾತನಾಡಿ, ಬೆಳಗಾವಿ ಉಪವಿಭಾಗ ಹಾಗೂ ಚಿಕ್ಕೋಡಿ ಉಪವಿಭಾಗದ 485 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ತರಬೇತಿ ನೀಡಲಾಗುತ್ತಿದೆ. ಅದನ್ನು ಪರಿಣಾಮಕಾರಿಯಾಗಿ ಅಳವಡಿಸಿ ಜಾರಿಗೊಳಿಸಬೇಕು. ದಿನನಿತ್ಯದ ಕೆಲಸಗಳ ಬಗ್ಗೆ ಅಂತರ್ಜಾಲದ ಮೂಲಕ ಮಾಹಿತಿ ಪೂರೈಸಬೇಕು ಎಂದು ಹೇಳಿದರು.
ಕಳೆದ ವರ್ಷ ಜಿಲ್ಲಾ ಪಂಚಾಯಿತಿಯಿಂದ 298 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಪ್ರಸಕ್ತ ವರ್ಷ ಇದುವರೆಗೆ ರೂ. 112 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು. ಪಂಚತಂತ್ರ ವೆಬ್ಸೈಟ್ದಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳ ಮಾಹಿತಿ ಇದೆ ಎಂದು ತಿಳಿಸಿದರು.ಕಾರ್ಯಾಗಾರದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಇಲಾಖೆಯ ಬಾಲಚಂದ್ರ ಮತ್ತು ಎಸ್.ಆರ್. ಕ್ಷೀರಸಾಗರ ಮಾಹಿತಿ ನೀಡಿದರು. ಜಿಪಂ ಉಪಾಧ್ಯಕ್ಷೆ ಸವಿತಾ ಶಿರಗಾಂವಿ ಉಪಸ್ಥಿತರಿದ್ದರು.