ತಿಳಿ ಗುಲಾಬಿ ಬಣ್ಣದ ಸೀರೆ ಉಟ್ಟಿದ್ದ ಹುಡುಗಿಯರ ಕಣ್ಣಲ್ಲಿ ಮಿಂಚಿನ ಹೊಳಪು. ಹುಡುಗರ ಮೊಗದಲ್ಲಿ ಖುಷಿಯ ಹೊನಲು. ಖುಷಿ ಹೆಚ್ಚಾಗಿ ಉದ್ವೇಗಕ್ಕೆ ಒಳಗಾಗಿದ್ದರಿಂದಲೋ ಏನೋ ವಿದ್ಯಾರ್ಥಿಗಳ ಹೃದಯದ ಬಡಿತ ಕೂಡ ಸ್ವಲ್ಪ ಹೆಚ್ಚಾಗಿತ್ತು.
ಅದು ಕನಸು ನನಸಾದ ಸಮಯ. ಹಾಗಾಗಿ ಅವರ ಕಂಗಳು ಕನಸಿನ ಕುಲುಮೆಯಂತಾಗಿದ್ದವು. ದೂರವಾಣಿ ನಗರದಲ್ಲಿರುವ ಐಟಿಐ ಸೆಂಟ್ರಲ್ ಸ್ಕೂಲ್ನ ಗ್ರ್ಯಾಜುಯೇಶನ್ ಡೇ ಸಮಾರಂಭ ಅದು. 10ನೇ ತರಗತಿಗೆ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ 110 ವಿದ್ಯಾರ್ಥಿಗಳು ಕಣ್ಣಲ್ಲೂ ಭವಿಷ್ಯದ ಮಿಂಚು ಇಣುಕುತ್ತಿತ್ತು. ನಾನು ಆ ಕಾಲೇಜಿಗೆ ಸೇರಿಕೊಂಡಿದ್ದೇನೆ. ಫ್ಯಾಕಲ್ಟಿ ತುಂಬಾ ಚೆನ್ನಾಗಿದೆ. ಲೈಬ್ರರಿಯಂತೂ ಸೂಪರ್. ನೀನು ಕೂಡ ಅದೇ ಕಾಲೇಜಿಗೆ ಸೇರಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು. ಇಬ್ಬರೂ ಒಟ್ಟಿಗೆ ಹೋಗಿ; ಒಟ್ಟಿಗೆ ಬರಬಹುದಿತ್ತು ಅಲ್ವಾ... ಎಂದು ವಿದ್ಯಾರ್ಥಿಗಳು ತಮ್ಮ ಗೆಳೆಯ ಗೆಳತಿಯರೊಂದಿಗೆ ಹರಟಿಕೊಳ್ಳುತ್ತಿದ್ದರು.
ನಾನು ಮುಂದೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ಗೆ ಸೇರುತ್ತೇನೆ ಎಂದು ಭವಿಷ್ಯದ ಕನಸು ಹೆಣೆಯುತ್ತಿದ್ದರು. ಪದವಿ ಸ್ವೀಕಾರ ಸಮಾರಂಭದ ಅಂಗವಾಗಿ ಎಲ್ಲ ವಿದ್ಯಾರ್ಥಿಗಳು ಒಂದೆಡೆ ಸೇರಿದ್ದರಿಂದ ಎಲ್ಲರ ಮೊಗದಲ್ಲೂ ಸಂತಸ ಮನೆ ಮಾಡಿಕೊಂಡಿತ್ತು. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜಿ.ಎಂ.ಉನಿಯಾಳ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.