ರಾಯಚೂರು: ಘನತ್ಯಾಜ್ಯ ಮತ್ತು ದ್ರವ್ಯ ತ್ಯಾಜ್ಯದ ಪರಿಸರ ಸ್ನೇಹಿ ನಿರ್ವಹಣೆ ಕುರಿತು ಶಾಲಾ ಮಕ್ಕಳಿಂದ ವಿಶೇಷ ಜಾಗೃತಿ ಜಾಥಾ ತಾಲ್ಲೂಕಿನ ಶಕ್ತಿನಗರದಲ್ಲಿ ಆರ್ಟಿಪಿಎಸ್ ಕಾಲೊನಿಯ ಶುಕ್ರವಾರ ನಡೆಯಿತು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕ್ಯಾಷುಟೆಕ್, ಕೆಪಿಸಿಎಲ್, ಡಿಎವಿ ಪಬ್ಲಿಕ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ, ಜಿಇಟಿ ಆಂಗ್ಲ ಪ್ರೌಢಶಾಲೆ ಆಶ್ರಯದಲ್ಲಿ ಜಾಥಾ ಆಯೋಜಿಸಲಾಗಿತ್ತು.
ಜಾಥಕ್ಕೆ ಆರ್ಟಿಪಿಎಸ್ ಕಾಲೊನಿ ಸಿವಿಲ್ ಮೆಂಟೆನೆನ್ಸ್ ವಿಭಾಗದ ಸಹಾಯಕ ನಿರ್ವಾಹಕ ಎಂಜಿನಿಯರ್ ಸಕಲ ಹಾಗೂ ಉಪಪ್ರಾಚಾರ್ಯ ವಿ.ಕೆ ಅಂಗಡಿ ಚಾಲನೆ ನೀಡಿದರು.
ಕ್ಯಾಷುಟೆಕ್ನ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಪಟ್ಟೇದ್, ಜಾಥಾದ ನೇತೃತ್ವ ವಹಿಸಿದ್ದರು.
ಮುಖ್ಯ ತರಬೇತಿ ಸಂಯೋಜಕ ಬಾಲಂಚಂದ್ರ ಜಾಬಶೆಟ್ಟಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಾಥಾವು ಶಕ್ತಿನಗರದ ಬಸ್ ನಿಲ್ದಾಣದಿಂದ ಆರಂಭಗೊಂಡ ಆರ್.ಟಿ.ಪಿ.ಎಸ್ ಕಾಲೊನಿಯಲ್ಲಿ ಸಂಚಾರಿಸಿ ನಂತರ ಬಸ್ ನಿಲ್ದಾಣದವರೆಗೆ ತೆರಳಿ ಅಂತ್ಯಗೊಳಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಪ್ರಕಾಶ, ದೈಹಿಕ ಶಿಕ್ಷಕರಾದ ಡಿ.ನರಸಿಂಹ, ಸುಭಾಷ್, ರವಿ ಕುಮಾರ, ಸುರೇಶ, ಬಸನಗೌಡ, ಇಕ್ಬಾಲ್, ನಾಗರಾಜಗೌಡ, ಸತ್ಯಪ್ಪ, ತಿಪ್ಪಣ್ಣ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.