ಬೆಂಗಳೂರು: ವಾಣಿಜ್ಯ ಸಂಕೀರ್ಣ ಅಭಿವೃದ್ಧಿ ಹಾಗೂ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗಾಗಿ ಕೂಡಲೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕೆಂದು ಜಯನಗರ ಕ್ಷೇತ್ರದ ಶಾಸಕ ಬಿ.ಎನ್.ವಿಜಯ್ಕುಮಾರ್ ಅವರು ಗೃಹ ಸಚಿವ ಆರ್.ಅಶೋಕ ಅವರಿಗೆ ಮನವಿ ಮಾಡಿದರು.
ಶಾಕಾಂಬರಿನಗರದಲ್ಲಿ ಶನಿವಾರ ನಡೆದ ಕೆಂಪೇಗೌಡ ಜನ್ಮ ದಿನಾಚರಣೆ ಮತ್ತು ಚಂದ್ರಗುಪ್ತ ಮೌರ್ಯ ಆಟದ ಮೈದಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ನಗರದ ಬೇರೆ ಕ್ಷೇತ್ರಗಳಿಗಿಂತ ಜಯನಗರದಲ್ಲಿ ಪಾರ್ಕ್ಗಳು, ರಸ್ತೆಗಳ ಅಭಿವೃದ್ಧಿ ಹಾಗೂ ಘನತ್ಯಾಜ್ಯ ವಿಲೇವಾರಿ ಮುಂತಾದ ಕಾಮಗಾರಿಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ~ ಎಂದರು.
ಸಮಾರಂಭ ಉದ್ಘಾಟಿಸಿದ ಸಂಸದ ಅನಂತಕುಮಾರ್, `ದೇವನಹಳ್ಳಿ ಬಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರ ನಿರ್ಮಾತೃ ಕೆಂಪೇಗೌಡರ ಹೆಸರಿಡಲು ಸದ್ಯದಲ್ಲೇ ಸಚಿವ ಆರ್.ಅಶೋಕ ಅವರ ನೇತೃತ್ವದಲ್ಲಿ ನಿಯೋಗವೊಂದನ್ನು ದೆಹಲಿಗೆ ಕಳುಹಿಸಿ, ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು~ ಎಂದರು.
ಸಚಿವ ಅಶೋಕ ಮಾತನಾಡಿ, `60 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಈ ಆಟದ ಮೈದಾನದಿಂದ ಸ್ಥಳೀಯರಿಗೆ ತುಂಬಾ ಅನುಕೂಲವಾಗಲಿದೆ~ ಎಂದರು. ಉಪ ಮೇಯರ್ ಎಲ್.ಶ್ರೀನಿವಾಸ್, ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್, ಪಾಲಿಕೆ ಸದಸ್ಯರಾದ ಬಿ. ಸೋಮಶೇಖರ್, ಎಸ್. ಕೆ. ನಟರಾಜ್, ಸಿ.ಕೆ. ರಾಮಮೂರ್ತಿ, ಮುನಿಸಂಜೀವಯ್ಯ, ಎನ್.ಚಂದ್ರಶೇಖರ್ ರಾಜು ಇತರರಿದ್ದರು.