ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಚಂದ್ರವನ ಆಶ್ರಮದಲ್ಲಿ ಸೋಮವಾರ ಭಕ್ತಿ- ಜ್ಞಾನ ಸಂಗಮ ಕಾರ್ಯಕ್ರಮ ನಡೆಯಿತು.
ಶಾಸಕ ರಮೇಶ ಬಂಡಿಸಿದ್ದೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಇಂದಿನ ಒತ್ತಡದ ಬದುಕಿನಲ್ಲಿ ಧ್ಯಾನ, ಪ್ರಾಣಾಯಾಮಗಳು ಅಗತ್ಯವಾಗಿ ಬೇಕು. ದೇವರ ಮೇಲಿನ ಭಯ, ಭಕ್ತಿಯಿಂದ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ. ಸಮಾಜ ಸೇವಾ ಕಾರ್ಯದಲ್ಲಿ ತೊಡಗಿರುವ ಮಠ, ಮಂದಿರಗಳ ಜತೆ ಸಾರ್ವಜನಿಕರು ಕೈ ಜೋಡಿಸಬೇಕು. ಅನಕ್ಷರತೆ, ಮೂಢ ನಂಬಿಕೆ, ಕಂದಾಚಾರಗಳ ಪರಿಣಾಮಗಳ ಬಗ್ಗೆ ಮಠಾಧೀಶರು ಜನಜಾಗೃತಿ ಕಾರ್ಯಕ್ರಮ ರೂಪಿಸಬೇಕಾದ ಅಗತ್ಯವಿದೆ ಎಂದರು.
ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಕಳೆದ 78 ತಿಂಗಳುಗಳಿಂದ ಮಠದಲ್ಲಿ ಅಮಾವಾಸ್ಯೆ ಪೂಜೆ, ಭಕ್ತಿ- ಜ್ಞಾನ ಸಂಗಮ ಕಾರ್ಯಕ್ರಮ ನಡೆಯುತ್ತಿದೆ. ಸ್ಥಳೀಯರು ಅಷ್ಟೇ ಅಲ್ಲದೆ ವಿವಿಧ ಜಿಲ್ಲೆಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಶಾಂತಿಯನ್ನು ಅರಸಿ ಆಶ್ರಮಕ್ಕೆ ಬರುತ್ತಿದ್ದಾರೆ. ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಬೇಬಿ ಮಠ ಸಂತ್ರಸ್ತರ ನೆರವಿಗೆ ನಿಲ್ಲುತ್ತಿದೆ. ಈ ಸಮಾಜ ಕಾರ್ಯಕ್ಕೆ ಜನರು ಸಹಕಾರ ನೀಡಬೇಕು ಎಂದರು. ನರಗುಂದದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹರೀಶ್ಗೌಡ, ಟಿ.ಪಿ. ಶಿವಕುಮಾರ್, ಜಯರಾಂ, ಕುಮಾರದೇವರು ಇದ್ದರು.