ಬೆಂಗಳೂರು: ಚಂದ್ರಿಲ್ ಸೂಡ್ ಮತ್ತು ಸಾಯಿ ಸಂಹಿತಾ ಚಾಮರ ಡಿ.ಎಸ್. ಮ್ಯಾಕ್ಸ್ ಎಐಟಿಎ ಟೆನಿಸ್ ಚಾಂಪಿಯನ್ಷಿಪ್ನ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್ನಲ್ಲಿ ಶನಿವಾರ ಕೊನೆಗೊಂಡ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಉತ್ತರ ಪ್ರದೇಶದ ಚಂದ್ರಿಲ್ 4–6, 6–2, 6–4ರಲ್ಲಿ ತಮಿಳುನಾಡಿನ ಮೋಹಿತ್ ಮಯೂರ್ ಜಯಪ್ರಕಾಶ್ ಎದುರು ಗೆಲುವು ಪಡೆದರು. ಈ ಮೂಲಕ ಅವರು 27,300 ರೂಪಾಯಿ ಬಹುಮಾನ ತಮ್ಮದಾಗಿಸಿಕೊಂಡರು. ಎರಡನೇ ಸ್ಥಾನ ಪಡೆದ ಮೋಹಿತ್ಗೆ 18,900 ರೂಪಾಯಿ ಬಹುಮಾನ ಲಭಿಸಿತು.
‘ಈ ಋತುವಿನಲ್ಲಿ ಪಡೆದು ಅತ್ಯುತ್ತಮ ಗೆಲುವು ಇದು. ಇಲ್ಲಿ ಪ್ರಶಸ್ತಿ ಜಯಿಸಿದ್ದು ಖುಷಿ ನೀಡಿದೆ. ಪ್ರದರ್ಶನ ತೃಪ್ತಿ ನೀಡಿದೆ’ ಎಂದು ಚಂದ್ರಿಲ್ ಹರ್ಷ ವ್ಯಕ್ತಪಡಿಸಿದರು.
ಸಂಹಿತಾಗೆ ಪ್ರಶಸ್ತಿ: ಮಹಿಳಾ ವಿಭಾಗದ ಸಿಂಗಲ್ಸ್ನಲ್ಲಿ ತಮಿಳುನಾಡಿನ ಸಾಯಿ ಸಂಹಿತಾ 6–4, 6–2ರಲ್ಲಿ ಮಹಾರಾಷ್ಟ್ರದ ಆದ್ನ್ಯಾ ನಾಯ್ಕ್ ಎದುರು ಸುಲಭ ಗೆಲುವು ಸಾಧಿಸಿ 18,200 ರೂಪಾಯಿ ಬಹುಮಾನ ಪಡೆದರು. ರನ್ನರ್ ಅಪ್ ಆದ್ನ್ಯಾ 12,600 ರೂ. ಬಹುಮಾನ ಜೇಬಿಗಿಳಿಸಿದರು. ಹೈದರಾಬಾದ್ನಲ್ಲಿ ಇದೇ ವರ್ಷದ ಮೇ ನಲ್ಲಿ ನಡೆದ ಟೆನಿಸ್ ಟೂರ್ನಿಯಲ್ಲಿ ಸಂಹಿತಾ ಪ್ರಶಸ್ತಿ ಗೆದ್ದು ಐದು ಲಕ್ಷ ರೂಪಾಯಿ ಬಹುಮಾನ ಗೆದ್ದುಕೊಂಡಿದ್ದರು
ಮೋಹಿತ್– ನಿತಿನ್ ಚಾಂಪಿಯನ್: ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ನಿರಾಸೆ ಕಂಡಿದ್ದ ಮೋಹಿತ್ ಮಯೂರ್ ಡಬಲ್ಸ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಪುರುಷರ ಡಬಲ್ಸ್ ವಿಭಾಗದಲ್ಲಿ ಕೆ. ನಿತಿನ್ ಜೊತೆಗೂಡಿ ಆಡಿದ ಮೋಹಿತ್ ಫೈನಲ್ ಹಣಾಹಣಿಯಲ್ಲಿ 6–2, 6–4ರಲ್ಲಿ ಲಕ್ಷಿತ್ ಸೂಡ್ ಹಾಗೂ ಚಂದ್ರಿಲ್ ಸೂಡ್ ಎದುರು ಗೆಲುವು ಸಾಧಿಸಿದರು.
ಅರಾಂತ್ಸಾ ಅಂಡ್ರಿಡೆ ಮತ್ತು ಆದ್ನ್ಯಾ ನಾಯ್ಕ್ ಮಹಿಳಾ ವಿಭಾಗದ ಡಬಲ್ಸ್ನ ಪ್ರಶಸ್ತಿ ಗೆದ್ದುಕೊಂಡರು. ಪ್ರಶಸ್ತಿಘಟ್ಟದ ಹೋರಾಟದಲ್ಲಿ ಈ ಜೋಡಿ 6–1, 6–2ರಲ್ಲಿ ಸ್ಮೃತಿ ಜೂನ್ – ಲಿಖಿತಾ ಶೆಟ್ಟಿ ಅವರನ್ನು ಮಣಿಸಿದರು. ಹೊಂದಾಣಿಕೆಯ ಆಟವಾಡಿದ ಅರಾಂತ್ಸಾ– ಆದ್ನ್ಯಾ ಕೇವಲ ಮೂರು ಗೇಮ್ಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು.