ಆನೇಕಲ್:ಬನ್ನೇರುಘಟ್ಟದಲ್ಲಿ ಗ್ರಾಮ ದೇವತೆ ಮಾರಮ್ಮ ಹಾಗೂ ಚಂಪಕಧಾಮಸ್ವಾಮಿ ವಿಜಯದಶಮಿ ಉತ್ಸವ ಸಂಭ್ರಮದಿಂದ ನೆರವೇರಿತು.
ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ವನರಾಜನ ಮೇಲೆ ಚಂಪಕಧಾಮಸ್ವಾಮಿ ಉತ್ಸವಮೂರ್ತಿಯನ್ನು ಹಾಗೂ ಆನೆ ಗಾಯಿತ್ರಿಯ ಮೇಲೆ ಗ್ರಾಮ ದೇವತೆ ಮಾರಮ್ಮನ ಮೂರ್ತಿಯ ಅಂಬಾರಿಯನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಮಾಡಲಾಯಿತು.
ಉತ್ಸವದಲ್ಲಿ ನಂದಿ ಧ್ವಜ, ಜಗ್ಗಲಿಗೆ, ಕರಗನೃತ್ಯ ಸೇರಿದಂತೆ ವಿವಿಧ ಜಾನಪದ ತಂಡಗಳು ಪ್ರದರ್ಶನ ನೀಡಿ ಮೆರುಗು ನೀಡಿದವು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಬಿಎಂಟಿಸಿ ಉಪಾಧ್ಯಕ್ಷ ಹಾಗೂ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ ಮಂಗಳೂರು ದಸರಾ ಉತ್ಸವಕ್ಕೆ ನೀಡುವಂತೆ ಬನ್ನೇರುಘಟ್ಟ ದಸರಾ ಉತ್ಸವಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಮುಂದಿನ ವರ್ಷ ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಜಯರಾಂ ಮಾತನಾಡಿ ಚಂಪಕಧಾಮಸ್ವಾಮಿ ದೇವಾಲಯದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣಮಂಟಪ, ಅನ್ನಛತ್ರಗಳನ್ನು ನಿರ್ಮಿಸಲಾಗಿದೆ. ತಂಗುದಾಣ, ಕುಡಿಯುವ ನೀರು ಹಾಗೂ ಶೌಚಾಲಯ ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.