ವಿಜಾಪುರ: ಇಲ್ಲಿಯ ಜಂಗ್ಲಿ ಗ್ರೂಪ್ ಯುವ ಸೇನೆಯಿಂದ ಮಣ್ಣೆತ್ತಿನ ಅಮಾವಾಸ್ಯೆಯ ದಿನವಾದ ಮಂಗಳವಾರ ಸಂಜೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಮಹಾಲ ಗ್ರಾಮದವರೆಗೆ ಮಣ್ಣೆತ್ತಿನ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು.
ಉತ್ತಮ ಮಳೆ-ಬೆಳೆಗೆ ಪ್ರಾರ್ಥಿಸಿ ಹಮ್ಮಿಕೊಂಡಿದ್ದ ಈ ಮೆರವಣಿಗೆಗೆ ಎ.ಪಿ. ಗ್ರೂಪ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ದೇವಾನಂದ ಚವ್ಹಾಣ ಸಿದ್ಧೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಮುದಕಪ್ಪ ಅವಟಿ, ಪರಶುರಾಮ ಡೋಣಿ, ಸುಭಾಸ ಹಳ್ಳದ, ರಾಜು ಮನಗೂಳಿ, ಮಹೇಶ ಬಡಿಗೇರ, ಮಲ್ಲು, ರಾವುತಪ್ಪ, ಚನ್ನಪ್ಪ ಹಳ್ಳದ, ಗುರುರಾಜ ದೇಶಪಾಂಡೆ, ವಿಜಯ ಜೋಶಿ, ವಿಜಯ ಶಾಪೇಟಿ, ಸುನೀಲ ಬಾಣಿಕೋಲ ಇತರರು ಪಾಲ್ಗೊಂಡಿದ್ದರು.
ಕೃಷಿಕರಿಂದ ಪೂಜೆ
ಆಲಮಟ್ಟಿ : ಮಣ್ಣೆತ್ತಿನ ಅಮಾವಾಸ್ಯೆಯ ಪ್ರಯುಕ್ತ ಆಲಮಟ್ಟಿ, ನಿಡಗುಂದಿ, ವಂದಾಲ ಮಣ್ಣಿನಿಂದ ನಿರ್ಮಿಸಲಾದ ಎತ್ತುಗಳಿಗೆ ಪೂಜೆ ಸಲ್ಲಿಸಲಾಯಿತು.
ನಿಡಗುಂದಿಯ ವೀರಭದ್ರೇಶ್ವರ ದೇವಸ್ಥಾದ ಹತ್ತಿರ ಸುಂದರವಾದ ಮಂಟಪ ನಿರ್ಮಿಸಿ ಅದರಲ್ಲಿ ಮಣ್ಣಿನಿಂದ ತಯಾರಿಸಿದ ಎತ್ತುಗಳ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಗ್ರಾಮೀಣ ಪ್ರದೇಶದ ಊರುಗಳಲ್ಲಿ ಇಂದಿಗೂ ಹಳೆಯ ಸಂಪ್ರದಾಯ ಜಾರಿಯಲ್ಲಿದೆ.
ಗೋವುಗಳು ಕೃಷಿಕರ ಜೀವನದ ಅವಿಭಾಜ್ಯ ಅಂಗ. ಕೃಷಿಕಾರ್ಯಕ್ಕೆ, ಹೈನುಗಾರಿಕೆ, ಸಾವಯವ ಗೊಬ್ಬರ, ಮುಂತಾದ ರೀತಿಯಲ್ಲಿ ಉಪಯೋಗಿಯಾಗಿರುವ ಅವುಗಳು ಪೂಜನೀಯ. ಎತ್ತುಗಳನ್ನು ಎರಿಮಣ್ಣಿನಿಂದ ಮನೆಯಲ್ಲಿಯೇ ತಯಾರಿಸಿ ಅವುಗಳನ್ನು ಪೂಜೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ಮನೆಗಳಲ್ಲೂ ಮಣ್ಣೆತ್ತಿನ ಪೂಜೆ ಮಾಡಿ ಅವುಗಳಿಗೆ ಚುರುಮುರಿ ಹಾಗೂ ಹೂವಿನ ಹಾರ ಹಾಕಿದರು. ಮಕ್ಕಳು ಮಣ್ಮಿನ ಎತ್ತುಗಳನ್ನು ಹಿಡಿದು ಆಟವಾಡಿ ಸಂಭ್ರಮಿಸಿದರು.
ದೇವರಲ್ಲಿ ಪ್ರಾರ್ಥನೆ
ತಾಳಿಕೋಟೆ: ಪಟ್ಟಣದಲ್ಲಿ ಮಂಗಳವಾರ ಮಣ್ಣೆತ್ತಿನ ಅಮವ್ಯಾಸೆಯನ್ನು ಮಣ್ಣೆತ್ತುಗಳ ಪೂಜೆಯ ಮೂಲಕ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಕೃಷಿ ಕೆಲಸಕ್ಕೆ ಎತ್ತುಗಳನ್ನು ಕೊಳ್ಳಲಾಗದ ಬಡ ರೈತರು ಮಣ್ಣೆತ್ತುಗಳನ್ನು ಪೂಜಿಸುವ ಮೂಲಕ ಎತ್ತುಗಳನ್ನು ಕೊಳ್ಳುವ ಸಾಮರ್ಥ್ಯ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.