ಕಾಲೇಜು ಹಾಗೂ ಮೈಸೂರು ವಿ.ವಿ. ವಿಭಾಗಗಳಲ್ಲಿ ಚಕ್ಕರ್ ಹಾಕುವ ಮತ್ತು ತರಗತಿಗಳಲ್ಲಿ ಸರಿಯಾಗಿ ಬೋಧನೆ ಮಾಡದ ಉಪನ್ಯಾಸಕರ ಮೇಲೆ ನಿಗಾ ಇಟ್ಟು ನಿಯಂತ್ರಿಸಲು, ಪದವಿ ಕಾಲೇಜುಗಳಿಗೆ ಆನ್ಲೈನ್ ವ್ಯವಸ್ಥೆ ಹಾಗೂ ವಿ.ವಿ. ವಿಭಾಗಗಳಲ್ಲಿ ಬಯೋಮೆಟ್ರಿಕ್ ಮತ್ತು ಸಿ.ಸಿ. ಕ್ಯಾಮೆರಾ ಅಳವಡಿಸಲು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕುಲಪತಿ ಕೆ.ಎಸ್. ರಂಗಪ್ಪ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ, ಉಪನ್ಯಾಸಕರ ಹದ್ದುಮೀರಿದ ವರ್ತನೆಗೆ ಕಡಿವಾಣ ಬೀಳಲಿದೆ.
ಸಮಯ ಮತ್ತು ಕರ್ತವ್ಯಪ್ರಜ್ಞೆ ಬೆಳೆಸಿಕೊಂಡು ಶಿಸ್ತು, ಪ್ರಾಮಾಣಿಕತೆ, ನಿಷ್ಠೆ ಮುಂತಾದ ಮೌಲ್ಯಗಳ ಬಗ್ಗೆ ಮನವರಿಕೆ ಮಾಡಿ ನೀತಿ ಪಾಠ ಹೇಳಬೇಕಾದವರೇ ಎಲ್ಲಾ ತತ್ವಗಳನ್ನು ಗಾಳಿಗೆ ತೂರಿ, ಕರ್ತವ್ಯಕ್ಕೆ ಚ್ಯುತಿ ತಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿರುವುದು ವಿಷಾದನೀಯ.
ತಪ್ಪೆಸಗುವ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ತಂದು ಶಿಸ್ತಿನ ಪಾಠ ಹೇಳಬೇಕಾದ ಉಪನ್ಯಾಸಕರುಗಳಿಗೆ ಶಿಸ್ತಿನ ಹಾಗೂ ನೀತಿಪಾಠ ಹೇಳಿ ಅವರ ಮೇಲೆ ನಿಗಾ ಇಟ್ಟು ನಿಯಂತ್ರಿಸಬೇಕಾದ ವಾತಾವರಣ ಸೃಷ್ಟಿಯಾಗುತ್ತಿರುವುದು ಸಮಾಜದ ದುರಂತ.