ಸಾಗರ: ತರ್ಕಬದ್ಧವಾಗಿ ಯೋಚಿ ಸುವುದೇ ಚದುರಂಗ ಕ್ರೀಡೆಯಲ್ಲಿ ಪ್ರಮುಖ ಅಂಶವಾಗಿರುವುದರಿಂದ ಈ ಕ್ರೀಡೆಯಿಂದ ಮನುಷ್ಯನ ತಾರ್ಕಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಅಂತರರಾಷ್ಟ್ರೀಯ ಚೆಸ್ ಮಾಸ್ಟರ್ ಬಿ.ಎಸ್. ಶಿವಾನಂದ ಹೇಳಿದರು.
ಇಲ್ಲಿನ ಗುರುಭವನದಲ್ಲಿ ತಾಲ್ಲೂಕು ಚೆಸ್ ಅಸೋಸಿಯೇಷನ್ ಭಾನುವಾರ ಏರ್ಪಡಿಸಿದ್ದ 17 ವರ್ಷದೊಳಗಿನ ಬಾಲಕ, ಬಾಲಕಿಯರ ತಾಲ್ಲೂಕು ಮಟ್ಟದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ವಿಷಯವನ್ನು ಕುರುಡಾಗಿ ನಂಬಬಾರದು ಎನ್ನುವ ವೈಚಾರಿಕ ದೃಷ್ಟಿಕೋನ ಹೊಂದಿದ್ದವರು ಮಾತ್ರ ಉತ್ತಮ ಚೆಸ್ ಆಟಗಾರನಾಗಲು ಸಾಧ್ಯ ಎಂದರು.
ಮನುಷ್ಯನ ಜೀವನಕ್ಕೆ ಅಗತ್ಯವಾದ ಹಲವು ಉತ್ತಮ ಪಾಠಗಳನ್ನು ಚದುರಂಗ ಕ್ರೀಡೆ ಕಲಿಸುತ್ತದೆ. ಚದುರಂಗದಲ್ಲಿ ಪ್ರತಿಯೊಂದು ನಡೆಯ ಹಿಂದೆ ಬಲವಾದ ಸಕಾರಣ ಇರುತ್ತದೆ. ನಮ್ಮ ಜೀವನದಲ್ಲೂ ಈ ಅಂಶವನ್ನು ನಾವು ಪಾಲಿಸಿದ್ದಲ್ಲಿ ಸೋಲನ್ನು ಕೂಡ ಸವಾಲಾಗಿ ಸ್ವೀಕರಿಸುವ ಗುಣ ನಮ್ಮದಾಗುತ್ತದೆ ಎಂದು ಹೇಳಿದರು.
ಫುಟ್ಬಾಲ್ ಹೊರತುಪಡಿಸಿದರೆ ಹೆಚ್ಚು ರಾಷ್ಟ್ರಗಳಲ್ಲಿ ಜನಪ್ರಿಯವಾಗಿರುವ ಕ್ರೀಡೆ ಎಂದರೆ ಚದುರಂಗ. ಪ್ರಪಂಚದ ಚದುರಂಗ ಕ್ರೀಡೆಯ ನಕ್ಷೆಯಲ್ಲಿ ಭಾರತಕ್ಕೆ ಮಹತ್ವದ ಸ್ಥಾನವಿದೆ. ಮಕ್ಕಳು ಚೆಸ್ನಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಅವರ ಬೌದ್ಧಿಕ ಬೆಳವಣಿಗೆಯಾಗಿ ನೆನಪಿನ ಶಕ್ತಿ ವೃದ್ಧಿಸುತ್ತದೆ. ಇದರಿಂದ ಅವರ ಓದಿಗೆ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಲ್.ಬಿ ಮತ್ತು ಎಸ್.ಬಿ.ಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಶಿವಣ್ಣ ಮಾತನಾಡಿದರು.
ಇದೇ ಸಂದರ್ಭದಲ್ಲಿ ಚದುರಂಗ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿರುವ ಬಿ.ಎಸ್.ಶಿವಾನಂದ ಅವರನ್ನು ಸನ್ಮಾನಿಸಲಾಯಿತು. ಉದಯೋನ್ಮುಖ ಚೆಸ್ ಪಟುಗಳಾದ ಧ್ರುವ ಚಿಪ್ಳಿ, ಶಶಾಂಕ್.ಎಚ್.ಎಸ್, ಮನಸ್ವಿನಿ, ಚಿತ್ಕಲಾ ವಿ.ಭಟ್ ಅವರನ್ನು ಅಭಿನಂದಿಸಲಾಯಿತು.
ತಾಲ್ಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣಪ್ಪ, ಹಿರಿಯ ಚೆಸ್ ಆಟಗಾರ ಎಂ.ಡಿ.ಮುದ್ದೇರ್, ಉದ್ಯಮಿ ರಾಜಕುಮಾರ್ ಹಾಜರಿದ್ದರು. ಗವಿಯಪ್ಪ ಪ್ರಾರ್ಥಿಸಿದರು. ಸುರೇಶ್ ಸ್ವಾಗತಿಸಿದರು. ಅಖಿಲೇಶ್ ಚಿಪ್ಳಿ ವಂದಿಸಿದರು. ಹುಚ್ಚರಾಯಪ್ಪ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.