ಚನ್ನಪಟ್ಟಣ: ಶಾಲೆಗೆ ಬಾರದೆ ಹೊರಗುಳಿದಿರುವ ಮಕ್ಕಳನ್ನು ಶಿಕ್ಷಣ ವಾಹಿನಿಗೆ ತರಲು ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ಜಿಲ್ಲಾ ಮತ್ತು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಿಜೆಎಲ್ ಪಬ್ಲಿಕ್ ಶಾಲೆ ಹಾಗೂ ಶಿವಮೊಗ್ಗದ ವನಶ್ರೀ ಟ್ರಸ್ಟ್ನ ಸಹಯೋಗಿತ್ವದಲ್ಲಿ ನಗರದಲ್ಲಿ ಬುಧವಾರ ನಡೆದ ಶೈಕ್ಷಣಿಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ತಹಶೀಲ್ದಾರ್ ಎ
ಚ್.ಎಸ್.ಅರುಣ ಪ್ರಭ ಕಾರ್ಯಕ್ರಮ ಉದ್ಘಾಟಿಸಿದರು. ಜಾಗೃತಿ ಜಾಥಾ ಪ್ರವಾಸಿ ಮಂದಿರದಿಂದ ಹೊರಟು ಬಿ.ಎಂ.ರಸ್ತೆಯಲ್ಲಿ ಸಾಗಿ ಅಂಚೆ ಕಚೇರಿ ರಸ್ತೆ, ಎಂ.ಜಿ.ರಸ್ತೆ, ಬಿಎಂ ರಸ್ತೆ ಮೂಲಕ ನಗರದ ಕುವೆಂಪು ನಗರ 5ನೇ ಅಡ್ಡರಸ್ತೆಯ ಬಿಜೆಎಲ್ ಪಬ್ಲಿಕ್ ಶಾಲೆಯಲ್ಲಿ ಸಮಾವೇಶಗೊಂಡಿತು.
ಜಾಥಾದಲ್ಲಿ ಬಾಲಕ-ಬಾಲಕಿಯರು, ಡೊಳ್ಳು ಕುಣಿತ, ಕೋಲಾಟ, ಮಹಾರಾಜರ ವೇಷತೊಟ್ಟು ತಮ್ಮ ಕಲಾ ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ 6 ವರ್ಷದಿಂದ 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸಿ ಶಾಲೆಗೆ ಕಳುಹಿಸಿ. ಎಳೆ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಬೇಡಿ. ಎಂಬಿತ್ಯಾದಿ ಘೋಷಣೆಗಳನ್ನು ಜಾಥಾದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಕೂಗುತ್ತಾ ಸಾಗಿ ಸಾರ್ವಜನಿಕರಲ್ಲಿ ಶೈಕ್ಷಣಿಕ ಅರಿವು ಮೂಡಿಸಿದರು.
14 ವರ್ಷದೊಳಗಿನ ಯಾವ ಮಗುವೂ ಶಾಲೆಯಿಂದ ಹೊರಗೆ ಉಳಿಯಬಾರದು. ಬಾಲ ಕಾರ್ಮಿಕರಾಗಿದ್ದುಕೊಂಡು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳ ಹಕ್ಕು ಅರಿಯಿರಿ. ಅರಿತು ಅವರನ್ನು ಬೆಳೆಸಿರಿ ಎಂಬ ಸದುದ್ದೇಶದಿಂದ ರಾಜ್ಯವ್ಯಾಪಿ ಈ ಶೈಕ್ಷಣಿಕ ಕಲಾ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದರು.
ಜಾಥಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ, ಕಾರ್ಮಿಕ ನಿರೀಕ್ಷಕಿ ಗೀತಾ, ಎಸಿಡಿಪಿಓ ಪಾರ್ವತಮ್ಮ, ಭಾವಿಪ ಪ್ರಾಂತೀಯ ಕಾರ್ಯದರ್ಶಿ ಕಾಡಯ್ಯ ಕೆಂಪಯ್ಯ, ಶಿಕ್ಷಕರಾದ ವಿಷಕಂಠ, ಶಾರದಾ, ಮಮತಾ ಮುಂತಾದವರು ಪಾಲ್ಗೊಂಡಿದ್ದರು.