ಚನ್ನಪಟ್ಟಣ: ತಲೆ ಕೆಳಗೆ ಮಾಡಿ ಕೈಗಳ ಮೇಲೆ ನಡೆಯುತ್ತಿದ್ದ ಬಾಲಕನೊಬ್ಬ ಆಯತಪ್ಪಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಮೋಳೆದೊಡ್ಡಿ ಗ್ರಾಮದ ಕುಮಾರಸ್ವಾಮಿ (15) ಮೃತಪಟ್ಟ ಬಾಲಕ. ಈತ ಹೊಂಗನೂರು ಕೆರೆಯಂಗಳದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ನೋಡಲು ಬಂದಿದ್ದ.
ಕುಮಾರಸ್ವಾಮಿ ಯೋಗಾಭ್ಯಾಸದಲ್ಲಿ ಪರಿಣತನಾಗಿದ್ದು, ಕೆರೆ ಅಂಗಳದಲ್ಲೇ ತಲೆಕೆಳಗೆ ಮಾಡಿ ನಡೆಯುತ್ತಾ ಸಾಹಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಈತನ ಕೈಗಳು ಕೆರೆಯಲ್ಲಿ ಸೀಳುಬಿಟ್ಟಿದ್ದ ರಂಧ್ರದಲ್ಲಿ ಸಿಕ್ಕಿ ಬಿದ್ದು ಆಯತಪ್ಪಿ ಕುಸಿದುಬಿದ್ದಿದ್ದಾನೆ.ಗಾಯಗೊಂಡ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.