ಮಳವಳ್ಳಿ: ಪಟ್ಟಣದ ಮೈಸೂರು ರಸ್ತೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿರುವುದು ಅವೈಜ್ಞಾನಿಕವಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಅನುಗುಣವಾಗಿ ಕಾಮಗಾರಿ ನಡೆಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ.ನಾಗೇಗೌಡ, ಟಿಎಪಿಸಿಎಂಎಸ್ನ ನಿರ್ದೇಶಕ ಕೆ.ಎಸ್.ನಾಗರಾಜು ಹಾಗೂ ಮುಖಂಡ ಬಸವಲಿಂಗಪ್ಪ ಅವರು ಜಂಟಿ ಹೇಳಿಕೆ ನೀಡಿದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದರಿಂದ ತಾತ್ಕಾಲಿಕ ಉಪಯೋಗವಷ್ಟೆವಾಗಲಿದ್ದು, ಭವಿಷ್ಯದ ಹಿನ್ನೆಲೆಯಲ್ಲಿ ಯಾವುದೇ ಉಪಯೋಗವಾಗುವುದಿಲ್ಲ. ಸುಗಮ ಸಂಚಾರ ವ್ಯವಸ್ಥೆಯೂ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ರಸ್ತೆ ವಿಭಜಕ ಮಾಡಲು ಪ್ರಾರಂಭಿಸಿ ನಂತರ ನಿಲ್ಲಿಸಿರುವುದರಿಂದ ರಸ್ತೆ ಮಧ್ಯೆ ಗುಂಡಿಯಾಗಿ ಅಪಘಾತಗಳು ಸಂಭವಿಸುತ್ತಿವೆ.
ಈ ಬಗ್ಗೆ ಲೋಕೋಪಯೋಗಿ, ಪುರಸಭೆಯವರನ್ನು ಕೇಳಿದರೆ ಸಮರ್ಪಕ ಮಾಹಿತಿ ನೀಡುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.