ಸಂತೇಮರಹಳ್ಳಿ: ಕಾವುದವಾಡಿ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡು ವರ್ಷ ಕಳೆದಿದೆ. ಕೊಳವೆ ಬಾವಿಯಿಂದ ಓವರ್ ಹೆಡ್ ಟ್ಯಾಂಕ್ಗೆ ಪೂರೈಸಿದ ನೀರು ಸೋರಿಕೆ ಯಾಗುತ್ತಿದೆ. ಪರಿಣಾಮವಾಗಿ ಟ್ಯಾಂಕ್ ಪೂರ್ಣ ಪ್ರಮಾಣದಲ್ಲಿ ನೀರು ತುಂಬುತ್ತಿಲ್ಲ. ಇದರಿಂದ ತೊಂದರೆಪಡುವಂತಾಗಿದೆ.
ಗ್ರಾಮದ ಹೊಸ ಬಡಾವಣೆಗೆ ಟ್ಯಾಂಕ್ನಿಂದ ಪೈಪ್ ಲೈನ್ ಅಳವಡಿಸಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ. ಕಿರು ನೀರು ಸರಬರಾಜು ಘಟಕದ ತೊಂಬೆಗಳಿಂದ ಹೊಸ ಬಡಾವಣೆಯ ನಿವಾಸಿಗಳು ಕುಡಿಯುವ ನೀರು ಪಡೆದುಕೊಳ್ಳಬೇಕಾಗಿದೆ.
ಓವರ್ ಹೆಡ್ ಟ್ಯಾಂಕ್ನಲ್ಲಿ ಸೋರಿಕೆಯಾಗುತ್ತಿರುವ ನೀರನ್ನು ತಡೆಗಟ್ಟಲು ಟ್ಯಾಂಕ್ ದುರಸ್ತಿಗೊಳಿಸಬೇಕಿದೆ. ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸುವ ವ್ಯವಸ್ಥೆ ಕಲ್ಪಿಸಬೇಕು ಎಂಬ ಗ್ರಾಮಸ್ಥರ ಮನವಿಗೆ ಯಾರೂ ಗಮನ ಹರಿಸಿಲ್ಲ. ಇದೇ ರೀತಿ ನಿರ್ಲಕ್ಷ್ಯಕ್ಕೆ ಒಳಗಾದರೇ ಕುಸಿದು ಬೀಳಲಿದೆ. ಆದ್ದರಿಂದ ಮುಂಜಾಗೃತವಾಗಿ ಓವರ್ಹೆಡ್ ದುರಸ್ತಿಗೊಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಉತ್ತಮವಾಗಿಲ್ಲ. ಹೂಳು ತೆಗೆಸದ ಪರಿಣಾಮ ಚರಂಡಿಯ ನೀರು ನಿಂತು ದುರ್ವಾಸನೆಗೂ ಕಾರಣವಾಗಿದೆ. ಮುಸ್ಸಂಜೆಯಾಗುತ್ತಿದ್ದಂತೆ ಸೊಳ್ಳೆ ಕಾಟ ವಿಪರೀತವಾಗುತ್ತದೆ ಎಂದು ನಿವಾಸಿಗಳು ದೂರುತ್ತಾರೆ.
ಚರಂಡಿಯ ಸುತ್ತಲೂ ಗಿಡ ಗಂಟಿ ಬೆಳೆದು ಗ್ರಾಮದ ಅನೈರ್ಮಲ್ಯಕ್ಕೂ ಕಾರಣವಾಗಿದೆ. ಹೊಸ ಬಡಾವಣೆಯಲ್ಲಿ ಚರಂಡಿ ನಿರ್ಮಿಸದ ಕಾರಣ ನಿವಾಸಿಗಳು ಮನೆಗಳ ಮುಂಭಾಗವೇ ಕೊಚ್ಚೆ ನೀರನ್ನು ಹರಿಸುವಂತಾಗಿದೆ. ಕೊಚ್ಚೆ ನೀರನ್ನು ನಿವಾಸಿಗಳು ತುಳಿದುಕೊಂಡು ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು ಕುಮಾರ್, ಮಹದೇವಸ್ವಾಮಿ.
‘ಚರಂಡಿ ಹೂಳು ತೆಗೆಸಲು ಕ್ರಮ ಕೈಗೊಳ್ಳಲಾಗುವುದು. ಹೊಸ ಬಡಾವಣೆಗೆ ಚರಂಡಿ ನಿರ್ಮಿಸುವಂತೆ ಶಾಸಕರಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಹದೇವ ಸ್ವಾಮಿ ಪ್ರಜಾವಾಣಿಗೆ ತಿಳಿಸಿದರು.
ಮಹದೇವ್ ಹೆಗ್ಗವಾಡಿಪುರ