ಲಿಂಗಸುಗೂರ: ಸರ್ಕಾಡಿ ಆಡಳಿತ ಪ್ರತಿಯೊಬ್ಬ ನಾಗರಿಕರಿಗೆ ಸರ್ಕಾರ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸುವ ಜವಾಬ್ದಾರಿ ಹೊಂದಿದೆ. ಆದರೆ, ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಪೈಪ್ಲೈನ್ ಚರಂಡಿಗುಂಟ ಹಾಕಿಕೊಂಡು ಹೋಗಿದ್ದು ಗ್ರಾಮಕ್ಕೆ ಕಲುಷಿತ ಹಾಗೂ ದರ್ನಾತದ ನೀರು ಪೂರೈಕೆಯಾಗುತ್ತಿದೆ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಗ್ಯಾನಪ್ಪ ಕಟ್ಟಿಮನಿ ಆರೋಪಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಿಸಿದ್ದು ಕೊಳಚೆ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಇಂತಹ ಚರಂಡಿಗುಂಟ ಕುಡಿಯುವ ನೀರಿನ ಪೈಪ್ಲೈನ್ ಹಾಕಿರುವುದು ಕಾಣಸಿಗುತ್ತದೆ. ಬಹುತೇಕ ಕಡೆಗಳಲ್ಲಿ ಪೈಪ್ಲೈನ್ ಮೇಲ್ಭಾಗದಲ್ಲಿ ಚರಂಡಿ ನಿರ್ಮಿಸಲಾಗಿದೆ. ಅಲ್ಲಲ್ಲಿ ಪೈಪಲೈನ್ ಸೋರಿಕೆ ಕಾಣಿಸಿಕೊಂಡಿದ್ದು ದುರಸ್ತಿ ಮಾಡದೆ ಹೋಗಿದ್ದರಿಂದ ಕೊಳಕು ನೀರು ಮಿಶ್ರಣಗೊಂಡು ವಾಂತಿ-ಭೇದಿ ಪ್ರಕರಣಗಳು ಉಲ್ಬಣಗೊಳ್ಳುತ್ತ ಸಾಗಿದೆ ಎಂದು ಸಂಗಪ್ಪ ನಗಿಮುಖದ ಕಳವಳ ವ್ಯಕ್ತಪಡಿಸಿದರು.
ಚರಂಡಿ ನಿರ್ಮಿಸುವಾಗ ಮತ್ತು ಕಳಪೆ ಪೈಪ್ಲೈನ್ ಹಾಕಿಸುವಾಗ ಸಾಕಷ್ಟು ಬಾರಿ ತಕರಾರು ಮಾಡಿದ್ದರು ಕೂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತೆಗೆದುಕೊಳ್ಳದೆ ಹೋಗಿರುವುದು ಚರಂಡಿಗುಂಟ ಪೈಪ್ಲೈನ್ ಅಥವಾ ಪೈಪ್ಲೈನ್ಗುಂಡ ಚರಂಡಿ ನಿರ್ಮಾಣ ಮಾಡಿರುವುದು ಜಿಲ್ಲೆಯಲ್ಲಿ ಮಾದರಿ ಕಾಮಗಾರಿಗಳಾಗಿವೆ. ಈ ಕುರಿತು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಪಂ ಸದಸ್ಯ ಸಂಗಪ್ಪ ಹೊಸಮನಿ ಆರೋಪಿಸಿದರು.
ವಾಂತಿ-ಭೇದಿ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದರಿಂದ ಗ್ರಾಮ ಭೇಟಿ ನೀಡಿದ ಸರ್ಕಾರಿ ವೈದ್ಯ ಡಾ. ಅಮರೇಗೌಡ ಚರಂಡಿಗುಂಟ ಪೈಪ್ಲೈನ್, ಕೆಲವೆಡೆ ಪೈಪಲೈನ್ ಮೇಲ್ಭಾಗದಲ್ಲಿ ಚರಂಡಿ ನಿರ್ಮಿಸಿದ್ದು ಕಂಡು ಬೆರಗಾದರು. ಕೆಲವೆಡೆ ಸೋರಿಕೆ ಕಾಣಿಸಿಕೊಂಡು ಕೊಳಕು ನೀರು ಪೂರೈಕೆ ಆಗಿದ್ದರಿಂದ ವಾಂತಿ-ಭೇದಿ ಕಾಣಿಸಿಕೊಂಡಿದ್ದು ಪೈಪ್ಲೈನ್ ಸ್ಥಳಾಂತರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ತಾಲ್ಲೂಕು ಆಡಳಿತಕ್ಕೆ ಪತ್ರ ಬರೆಯುವುದಾಗಿ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.