ಗೋಕಾಕ: ಇಸ್ರೇಲ್ ದೇಶದಲ್ಲಿ ನಿರ್ಮಾಣಗೊಂಡಿರುವ `ದಿ ಇನ್ನೊಸೆನ್ಸ್ ಆಫ್ ಮುಸ್ಲಿಂ~ ಚಲನಚಿತ್ರದಲ್ಲಿ ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿ ಅಂಶಗಳನ್ನು ಬಳಕೆ ಮಾಡಿರುವುದನ್ನು ಖಂಡಿಸಿ ಭಾರತೀಯ ಸೋಶಿಯಲ್ ವೆಲ್ಫೇರ್ ಅಸೋಶಿಯೇಷನ್ ಪದಾಧಿಕಾರಿಗಳು ಹಾಗೂ ಮುಸ್ಲಿಂ ಬಾಂಧವರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ವೆಲ್ಫೇರ್ ಅಧ್ಯಕ್ಷ ಇರ್ಷಾದ್ ಪಟೇಲ್ ನೇತೃತ್ವದಲ್ಲಿ ನಗರದ ಗುರುವಾರ ಪೇಟೆಯ ಮಸ್ತಾನಸಾಬ್ ದರ್ಗಾದಲ್ಲಿ ನೆರೆದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅವಹೇಳನಕಾರಿ ಅಂಶಗಳಿಂದ ಮುಸ್ಲಿಂ ಬಾಂಧವರಿಗೆ ನೋವುಂಟು ಮಾಡಿದೆ. ವಿವಾದಿತ ಚಿತ್ರವನ್ನು ಗೂಗಲ್ ಅಂತರಜಾಲದಲ್ಲಿ ಬಿಡುಗಡೆ ಮಾಡಲಾಗಿದ್ದು, ಚಲನಚಿತ್ರ ನಿಮಾಪಕ, ಚಿತ್ರನಟರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಲಾಲ್ ಕೊಳ್ಳೆಳಿ, ಹನೀಫ್ ಶಾಭಾಶಖಾನ್, ಮಂಜುರ ಶಮಶೇರ್, ಶರೀಫ್ ಮುಧೋಳ, ಮೌಲಾನಾ ಶಾಬುದ್ದೀನ್, ಬಾಷಾ ಸಿದ್ದಿಕಿ ಮೊದಲಾದವರು ಪಾಲ್ಗೊಂಡಿದ್ದರು.