ಮೇಲುಕೋಟೆ ಮಂಡ್ಯ ಜಿಲ್ಲೆ ಪ್ರಮುಖ ಯಾತ್ರಾಸ್ಥಳ. ಇಲ್ಲಿ ಪ್ರತಿ ವರ್ಷ ನಡೆಯುವ ವೈರಮುಡಿ ಉತ್ಸವ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳ ಅಸಂಖ್ಯಾತ ಭಕ್ತರನ್ನು ಸೆಳೆಯುತ್ತದೆ. ಚಲುವ ನಾರಾಯಣಸ್ವಾಮಿ ಮತ್ತು ಯೋಗಾನರಸಿಂಹಸ್ವಾಮಿ ದೇವಸ್ಥಾನಗಳು ಮೇಲುಕೋಟೆಯ ಪ್ರಮುಖ ಆಕರ್ಷಣೆ.
ಮೇಲುಕೋಟೆ ದಕ್ಷಿಣ ಭಾರತದ ನಾಲ್ಕು ಪ್ರಮುಖ ಶ್ರೀವೈಷ್ಣವ ಕ್ಷೇತ್ರಗಳಲ್ಲಿ ಒಂದು. ಕಂಚಿ, ತಿರುಪತಿ ಮತ್ತು ಶ್ರೀರಂಗಂ ಇನ್ನುಳಿದ ಮೂರು ಕ್ಷೇತ್ರಗಳು.ಮೇಲುಕೋಟೆ ದೇವಸ್ಥಾನಗಳಲ್ಲಿ ನಿತ್ಯ ಪೂಜೆ, ಅಭಿಷೇಕ ಇತ್ಯಾದಿ ಧಾರ್ಮಿಕ ಆಚರಣೆಗಳು ನಡೆದರೂ ವರ್ಷಕ್ಕೊಮ್ಮೆ
ನಡೆಯುವ (ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಏಕಾದಶಿ ಸಂದರ್ಭದಲ್ಲಿ) ವೈರಮುಡಿ ಉತ್ಸವ ಅತ್ಯಂತ ಪ್ರಮುಖ ಸಂದರ್ಭ.
ಬೆಟ್ಟಗುಡ್ಡಗಳು, ಆಕರ್ಷಕ ಶಿಲ್ಪಗಳು ಹಾಗೂ ಐತಿಹಾಸಿಕ ಹಿನ್ನೆಲೆಗಳಿಂದ ಮೇಲುಕೋಟೆ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ ಎನಿಸಿಕೊಂಡಿದೆ.ಇತಿಹಾಸದಲ್ಲಿ ಮೇಲುಕೋಟೆಗೆ ಯಾದವಾದ್ರಿ, ವೇದಾದ್ರಿ, ನಾರಾಯಣಾದ್ರಿ, ಯತಿ ಶೈಲ, ಯದುಗಿರಿ ಎಂಬ ಹೆಸರುಗಳೂ ಇದ್ದವು. ತ್ರೇತ್ರಾಯುಗದಲ್ಲಿ ದತ್ತಾತ್ರೇಯರು ಮೇಲುಕೋಟೆ ಪ್ರದೇಶದಲ್ಲಿ ವೇದ ಪಾರಾಯಣ ಮಾಡಿದ್ದರಿಂದ ವೇದಾದ್ರಿ ಎಂಬ ಹೆಸರು ಬಂತು.
ದ್ವಾಪರದಲ್ಲಿ ಶ್ರೀಕೃಷ್ಣ ಪೂಜಿಸಲ್ಪಟ್ಟಿದ್ದರಿಂದ ಇಲ್ಲಿಗೆ ಯಾದವಾದ್ರಿ ಎಂಬ ಹೆಸರಿತ್ತು. 12ನೆಯ ಶತಮಾನದಲ್ಲಿ ಆಚಾರ್ಯ ರಾಮಾನುಜರು ಮೇಲುಕೋಟೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದರಿಂದ ಯತಿಶೈಲ ಎಂಬ ಹೆಸರಿತ್ತು ಎಂಬುದು ಈಗ ಇತಿಹಾಸ.
ಕಲ್ಯಾಣಿಗಳು ಮೇಲುಕೋಟೆಯ ಪ್ರಮುಖ ಆಕರ್ಷಣೆಗಳು. ಅಕ್ಕ- ತಂಗಿಯರ ಕೊಳ ಸೇರಿದಂತೆ ಇಲ್ಲಿ ಒಟ್ಟು 101 ಕಲ್ಯಾಣಿಗಳಿದ್ದುವಂತೆ. ಈಗ 40 ರಿಂದ 50 ಕಲ್ಯಾಣಿಗಳಿವೆ. ಭುವನೇಶ್ವರಿ ಮಂಟಪ ಒಳಗೊಂಡ ಪಂಚ ಕಲ್ಯಾಣಿ, ಯದುಗಿರಿ ಅಮ್ಮನ ದೇಗುಲ ಬಳಿಯ ಕಲ್ಯಾಣಿ ಮುಖ್ಯ ಆಕರ್ಷಣೆಗಳು.