ನವದೆಹಲಿ (ಪಿಟಿಐ): ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಿಮಪಾತವಾಗುತ್ತಿದ್ದು, ಮರಗಟ್ಟುವ ಚಳಿಯಿಂದಾಗಿ ಜಮ್ಮು ನಗರದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಸಾವಿಗೀಡಾದವರಲ್ಲಿ ಒಬ್ಬ ಸಾಧು, ಮತ್ತೊಬ್ಬ ಭಿಕ್ಷುಕ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಗರದ ಸೇರಿದಂತೆ ಕಾಶ್ಮೀರ ಕಣಿವೆಯ ಬಹುತೇಕ ಪ್ರದೇಶದಲ್ಲಿ ಹಿಮಪಾತವಾಗುತ್ತಿದ್ದು, ಶುಕ್ರವಾರ 294 ಕಿ.ಮೀ. ಉದ್ದದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಲ್ಲಿಸಲಾಗಿತ್ತು.
ಗುರುವಾರ ರಾತ್ರಿಯಿಂದ ಸುರಿದ ಹಿಮದಿಂದಾಗಿ ಇಡೀ ಕಣಿವೆಯು ಶ್ವೇತ ವಸ್ತ್ರ ಹೊದ್ದಂತೆ ಭಾಸವಾಯಿತು.