ಮುದ್ದೇಬಿಹಾಳ: ಆಗ ತಾನೇ ಜನಿಸಿದ ಶಿಶುವನ್ನು ತಿಪ್ಪೆಗೆ ಎಸೆದು ಮಹಿಳೆ ಯೊಬ್ಬಳು ಪಾರಾಗಲು ಯತ್ನಿಸಿದ ದಾರುಣ ಘಟನೆ ಭಾನುವಾರ ಬೆಳಿಗ್ಗೆ ತಾಲ್ಲೂಕಿನ ಚವನಬಾವಿಯಲ್ಲಿ ನಡೆ ದಿದೆ. ಆದರೆ ಈ ಮಹಿಳೆಯ ಕೃತ್ಯವನ್ನು ಪತ್ತೆ ಹಚ್ಚಿದ ಅದೇ ಗ್ರಾಮದ ಮಹಿಳೆಯೊಬ್ಬಳು ಅವಳನ್ನು ಹಾಗೂ ಮಗುವನ್ನು ತಾಲ್ಲೂಕಿನ ನಾಲತವಾಡದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ತೋರಿಸಿದ್ದಾಳೆ.
ಘಟನೆಯ ವಿವರ: ಮಗುವನ್ನು ಹೆತ್ತ ಮಹಿಳೆ ಮೂಲತಃ ರೂಡಗಿ ಗ್ರಾಮದವಳಾಗಿದ್ದು, ಇವಳ ವಿವಾಹ ಈಗ್ಗೆ ಕೇವಲ ಒಂದು ವಾರದ ಹಿಂದೆ (ನ.25) ಚವನಬಾವಿ ಗ್ರಾಮದಲ್ಲಿ ನಡೆದಿತ್ತು. ಅಚ್ಚರಿ ಎಂದರೆ ಆ ವೇಳೆಯಲ್ಲಿಯೇ ಕಾಣಬಹುದಾಗಿದ್ದ ಗರ್ಭ, ಮಹಿಳೆ ದಪ್ಪಗೆ ಇದ್ದುದರಿಂದ ಕಂಡಿಲ್ಲ ಎನ್ನಲಾಗಿದೆ. ತಮ್ಮ ಸಂಬಂಧಿಗಳಲ್ಲಿಯೇ ಮದುವೆ ನಡೆದಿದ್ದರಿಂದ ಈ ಬಗ್ಗೆ ಯಾರೂ ಹೆಚ್ಚಿಗೆ ವಿಚಾರಿಸಿರಲಿಲ್ಲ. ಭಾನುವಾರ ಬೆಳಿಗ್ಗೆ ಶೌಚಕ್ಕೆ ಹೋಗುತ್ತೇನೆಂದು ಹೋಗಿದ್ದ ಮಹಿಳೆ ತಾನು ಹೆತ್ತ ಮಗುವನ್ನು ತಿಪ್ಪೆಯಲ್ಲಿಯೇ ಬಿಟ್ಟು ಬರುತ್ತಿದ್ದಳು ಎನ್ನಲಾಗಿದೆ. ಇದೇ ವೇಳೆ ಶೌಚಾಲಯಕ್ಕೆ ಬಂದ ಬೇರೆ ಮಹಿಳೆಯೊಬ್ಬಳು ರಕ್ತಸಿಕ್ತವಾಗಿದ್ದ ಬಟ್ಟೆ ಧರಿಸಿ ಗಾಬರಿಯಿಂದ ಪಲಾಯನ ಮಾಡಲೆತ್ನಿಸುತ್ತಿದ್ದ ಈ ಮಹಿಳೆಯನ್ನು ತಡೆದು ನಿಲ್ಲಿಸಿದಾಗ, ಈ ಮಗು ನನ್ನದಲ್ಲ, ಅದನ್ನು ಅಲ್ಲಿಯೇ ತಿಪ್ಪೆಯಲ್ಲಿ ಮುಚ್ಚಿ ಬಿಡಲು ತಿಳಿಸಿದ್ದಾಳೆ.
ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಗ್ರಾಮಸ್ಥ ರೊಬ್ಬರು ನಾಲತವಾಡದ 108 ವಾಹನಕ್ಕೆ ಫೋನ್ ಹಚ್ಚಿ, ತಾಯಿ ಮತ್ತು ಮಗುವನ್ನು ನಾಲತವಾಡದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿಯ ವೈದ್ಯ ಡಾ.ಸಿ.ಬಿ.ವಿರಕ್ತಮಠ ಅವರು ತಾಯಿ ಮತ್ತು ಸ್ವಲ್ಪ ಗಾಯ ಗೊಂಡಿದ್ದ ಮಗುವಿಗೆ ಪ್ರಥಮೋ ಪಚಾರ ನಡೆಸಿ ನಂತರ ಮಗುವಿನ ತೂಕ ಕಡಿಮೆ ಇದ್ದುದರಿಂದ ಮುದ್ದೇಬಿಹಾಳದ ತಾಲ್ಲೂಕು ಆಸ್ಪತ್ರೆಗೆ ಕಳಿಸಿ ದ್ದಾರೆ. ಅಲ್ಲಿಂದ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಮಗು ವಿಗೆ ಚಿಕಿತ್ಸೆ ನೀಡಿದ ಡಾ.ಓಂಕಾರ ಅವರು, ತಾಯಿ ಮತ್ತು ಮಗುವನ್ನು ಅವರ ಸಂಬಂಧಿಕರಿಗೆ ಒಪ್ಪಿಸಿದ್ದಾರೆ. ಸಧ್ಯಕ್ಕೆ ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.