ಚೆನ್ನೈ (ಪಿಟಿಐ): ಭಾರತದಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡಕ್ಕೆ ಕೊನೆಗೂ ಅವಕಾಶ ಲಭಿಸಿದೆ.
ಶನಿವಾರ ಸಭೆ ನಡೆಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯಕಾರಣಿ ಸಮಿತಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2008ರ ನವೆಂಬರ್ನಲ್ಲಿ ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ ಪಾಕಿಸ್ತಾನದ ಆಟಗಾರರನ್ನು ಭಾರತದಲ್ಲಿ ನಡೆಯುವ ಯಾವುದೇ ಟೂರ್ನಿಗೆ ಆಹ್ವಾನಿಸಿರಲಿಲ್ಲ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲೂ ಪಾಕ್ ಆಟಗಾರರಿಗೆ ಅವಕಾಶ ನೀಡಿಲ್ಲ. ಚಾಂಪಿಯನ್ಸ್ ಲೀಗ್ನಲ್ಲಿ ಪಾಕಿಸ್ತಾನಕ್ಕೂ ಅವಕಾಶ ಸಿಗಲಿ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಕ್ರಿಕೆಟ್ ದಕ್ಷಿಣ ಆಫ್ರಿಕಾ ಹಾಗೂ ಚಾಂಪಿಯನ್ಸ್ ಲೀಗ್ ಆಡಳಿತ ಮಂಡಳಿ ಶಿಫಾರಸು ಮಾಡಿದ್ದವು.
ಆದ್ದರಿಂದ ಈ ಬಗ್ಗೆ ಚರ್ಚೆ ನಡೆಸಲಾಯಿತು. ಪಾಕ್ ತಂಡ ಭಾರತದಲ್ಲಿ ಚಾಂಪಿಯನ್ಸ್ ಲೀಗ್ ಆಡಲಿ, ಇದಕ್ಕೆ ನಮ್ಮ ಆಕ್ಷೇಪವಿಲ್ಲ~ ಎಂದು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಹೇಳಿದರು