ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕೊಲೇಟ್ ಅಮಿಷ ಒಡ್ಡಿ ಅತ್ಯಾಚಾರ

Last Updated 7 ಸೆಪ್ಟೆಂಬರ್ 2013, 19:57 IST
ಅಕ್ಷರ ಗಾತ್ರ

ಬೆಂಗಳೂರು: ಚಾಕೊಲೇಟ್ ಕೊಡಿಸುವ ನೆಪದಲ್ಲಿ ಕರೆದೊಯ್ದು ಹದಿನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅನ್ವರ್ (55) ಎಂಬಾತನನ್ನು ಪುಲಿಕೇಶಿನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಾಲಕಿ ಗರ್ಭಿಣಿಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಕೋಲಾರ ಮೂಲದ ಅರ್ಪಿತಾ (ಹೆಸರು ಬದಲಾಯಿಸಲಾಗಿದೆ), ಪೋಷಕರೊಂದಿಗೆ ಪುಲಿಕೇಶಿನಗರದಲ್ಲಿ ವಾಸವಾಗಿದ್ದಾಳೆ. ಆಕೆಯ ನೆರೆಮನೆಯಲ್ಲೇ ನೆಲೆಸಿದ್ದ ಅನ್ವರ್, ಮೂರು ತಿಂಗಳಿನಿಂದ ಬಾಲಕಿ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದಾನೆ. ಶುಕ್ರವಾರ ಬೆಳಿಗ್ಗೆ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ, ವಾಂತಿ ಮಾಡಿಕೊಂಡು ನಿತ್ರಾಣಳಾಗಿದ್ದಾಳೆ. ಕೂಡಲೇ ಪೋಷಕರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಗ ಮಗಳು ಗರ್ಭಿಣಿಯಾಗಿರುವ ಸಂಗತಿ ಅವರಿಗೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಷಯ ತಿಳಿದು ಗಾಬರಿಗೊಂಡ ಪೋಷಕರು ಮಗಳನ್ನು ವಿಚಾರಿಸಿದಾಗ, `ನೆರೆಮನೆಯ ಅನ್ವರ್, ಚಾಕೊಲೇಟ್ ಕೊಡಿಸುವುದಾಗಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ' ಎಂದು ಹೇಳಿದ್ದಾಳೆ. ಆಗ ಪೋಷಕರು ಪುಲಿಕೇಶಿನಗರ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

`ಮೂರ್ನಾಲ್ಕು ಮನೆಗಳ ಬಾಡಿಗೆ ಹಣದಲ್ಲೇ ಜೀವನ ನಡೆಸುತ್ತಿದ್ದ ಅನ್ವರ್, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಬಾಲಕಿಯ ತಂದೆ ಸೆಕ್ಯುರಿಟಿ ಗಾರ್ಡ್ ಆಗಿದ್ದು, ಎಂಟು ತಿಂಗಳ ಹಿಂದೆ ಅನ್ವರ್‌ನನ್ನು ಪರಿಚಯ ಮಾಡಿಕೊಂಡಿದ್ದರು. ಪರಿಚಯವನ್ನು ದುರುಪಯೋಗಪಡಿಸಿಕೊಂಡ ಆರೋಪಿ ಆಗಾಗ್ಗೆ ಅವರ ಮನೆಗೆ ಬಂದು ಹೋಗುತ್ತಿದ್ದ. ಹೀಗೆ ಸಂಚು ರೂಪಿಸಿಕೊಂಡು ಕೃತ್ಯ ಎಸಗಿದ್ದಾನೆ' ಎಂದು ಪುಲಿಕೇಶಿನಗರ ಪೊಲೀಸರು ತಿಳಿಸಿದ್ದಾರೆ.

`ಬಾಲಕಿ ಮತ್ತು ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಈ ಬಗ್ಗೆ ವೈದ್ಯರು ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.

ಒಪ್ಪಿದರೆ ಮದುವೆ!
`ವಿಚಾರಣೆ ಆರಂಭದಲ್ಲಿ ತಾನು ಅತ್ಯಾಚಾರ ಎಸಗಿಲ್ಲ ಎಂದು ಹೇಳುತ್ತಿದ್ದ ಆರೋಪಿ ಅನ್ವರ್, ಬಳಿಕ `ಮದ್ಯದ ಅಮಲಿನಲ್ಲಿ ಅತ್ಯಾಚಾರ ಎಸಗಿರಬಹುದು. ಆಕೆಯ ಪೋಷಕರು ಒಪ್ಪಿದರೆ ನಾನೇ ಮದುವೆಯಾಗುತ್ತೇನೆ' ಎಂದು ಹೇಳಿದ. ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ
`13 ವರ್ಷದ ಮಗಳ ಮೇಲೆ ಸಂತೋಷ್ ಎಂಬಾತ ಅತ್ಯಾಚಾರ ಎಸಗಿದ್ದಾನೆ' ಎಂದು ಆರೋಪಿಸಿ ಬಾಲಕಿಯ ಪೋಷಕರು ಪುಲಿಕೇಶಿನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪಿಎಸ್‌ಕೆ ನಾಯ್ಡು ರಸ್ತೆ ನಿವಾಸಿಯಾದ ಸಂತೋಷ್ (30) ಪೇಂಟರ್ ಆಗಿದ್ದಾನೆ. ಸೆ.3ರಂದು ನೆರೆಮನೆಯ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT