ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕೊಲೇಟ್ ಹಾಡುಗಳ ಅಜ್ಜ

Last Updated 10 ಜುಲೈ 2013, 19:59 IST
ಅಕ್ಷರ ಗಾತ್ರ

ಮಾನವ ಜೀವನ ಅತ್ಯಮೂಲ್ಯಬದುಕು ಕೊನೆಯಿಲ್ಲದ ಸಂಶೋಧನೆಕಲಿತಷ್ಟು ಇನ್ನೂ ಕಲಿಯುವುದುಂಟುನಾವು ಕಲಿತಿರುವುದೆಲ್ಲಾ ದೂಳು ಕಾಣದಷ್ಟು...

-ಈ ಸಾಲುಗಳನ್ನು ಗುನುಗುತ್ತಾ ಮುಗ್ಧವಾಗಿ ನಗುತ್ತಾರೆ ಶಂಕರ್ ಸಾ. ವಯಸ್ಸು 76. ಗಾಂಧಿ ಟೋಪಿ ತೊಟ್ಟ ಇವರ ಕಣ್ಣುಗಳಲ್ಲಿ ಆತ್ಮವಿಶ್ವಾಸದ ನಗು, ಮಾತಿನಲ್ಲಿ ಪ್ರೀತಿ. ಇವಿಷ್ಟು ಶಂಕರ್ ಸಾ ಅವರನ್ನು ನೋಡಿದವರಿಗೆ ಸಿಗುವ ಕಿರುಪರಿಚಯ. 60ಕ್ಕೆ ಕಾಲು ನೋವು, ಸೊಂಟ ನೋವು ಎನ್ನುತ್ತಾ ಮುಂಜಾನೆ, ಮುಸ್ಸಂಜೆ ವಾಕಿಂಗ್ ಮಾಡುವ ಉಳಿದವರಿಗಿಂತ ಇವರು ಸ್ವಲ್ಪ ಭಿನ್ನ.

ನಾನೊಬ್ಬ ಪರಿಸರ ಪ್ರೇಮಿ ಎಂದು ಹೇಳಿಕೊಳ್ಳುವ ಇವರಿಗೆ ಪ್ರಚಾರದ ಹಂಬಲವಿಲ್ಲ. ಕೈಯಲ್ಲಿ ಚಿಕ್ಕದೊಂದು ಪುಸ್ತಕ, ಪೆನ್ನು ಹಿಡಿದು ತಮಗೆ ತೋಚಿದ್ದನ್ನು ಬರೆಯುತ್ತಾರೆ. ಅದಕ್ಕೆ ತಾವೇ ರಾಗ ಹಾಡುತ್ತಾರೆ. `ನನ್ನ ಹಾಡು ನನ್ನದು' ಎನ್ನುವ ಇವರ ಹಾಡುಗಳು ಇಂದಿನ ಹಾಡುಗಳಂತಿಲ್ಲದಿದ್ದರೂ ಅವುಗಳಲ್ಲಿ ಪರಿಸರದ, ಮಕ್ಕಳ ಕುರಿತು ಸಣ್ಣ ಕಾಳಜಿಯಿದೆ.

ಪುಟಾಣಿ ಮಕ್ಕಳಲ್ಲಿ ಆತ್ಮಬಲ ತುಂಬಿಸುವ ಕಾರ್ಯದಲ್ಲಿ ನಿರತರಾಗಿರುವ ಶಂಕರ್ ಅವರು ಶಾಲಾ ಕಾಲೇಜುಗಳಿಗೆ ಕಾಲ್ನಡಿಗೆಯಲ್ಲೇ ತೆರಳಿ ಉಪನ್ಯಾಸವನ್ನೂ ಮಾಡುತ್ತಾರೆ. ಇದುವರೆಗೂ ಇವರು ಭೇಟಿಕೊಟ್ಟಿರುವ ಶಾಲೆಗಳು ಬರೋಬ್ಬರಿ 328.

ಓದಿದ್ದು ಬಿ.ಎಸ್ಸಿ. ರೇಷ್ಮೆ ವ್ಯಾಪಾರ ಕುಲಕಸುಬು. ಮೊದಲಿನಿಂದಲೂ ಪರಿಸರದ ಬಗ್ಗೆ ತುಡಿತವಿತ್ತು. `ಯಾರನ್ನೋ ನಂಬಿಕೊಂಡು ಕುಳಿತುಕೊಳ್ಳುವುದಕ್ಕಿಂತ ತಾವೇ ಆ ಕೆಲಸ ಮಾಡಿದರೆ ಸಿಗುವ ಖುಷಿಯೇ ಬೇರೆ' ಎನ್ನುವ ಇವರು ತಮ್ಮ ಸಂತಸದ ತುಣುಕೊಂದನ್ನು ಬಿಚ್ಚಿಟ್ಟರು. 1998ರಲ್ಲೇ ಇವರಿದ್ದ ಎನ್.ಎಂ ಬೀದಿಯನ್ನು ಸರ್ಕಾರದ ನೆರವಿಲ್ಲದೇ ತಾವೇ ಶುಚಿಗೊಳಿಸಿ, ಒಂದು ಮಟ್ಟಕ್ಕೆ ತಂದಿದ್ದರು. ಆ ಕೆಲಸಕ್ಕೆ ಜನರಿಂದ ಬಂದ ಪ್ರತಿಕ್ರಿಯೆಯನ್ನು ಈಗಲೂ ನೆನೆಸಿಕೊಂಡು ಖುಷಿ ಪಡುತ್ತಾರೆ.

ಪರಿಸರದ ಕಾಳಜಿ ಜತೆ ಮಕ್ಕಳ ನಡವಳಿಕೆ ಹೇಗಿರಬೇಕು ಎಂಬ ವಿಷಯಗಳ ಸುತ್ತ ಹೆಣೆದಿರುವ ಕೆಲವು ಹಾಡುಗಳು ಶಂಕರ್ ಅವರ ಅನುಭವಕ್ಕೆ ನಿಲುಕಿದ ಸಂಗತಿಗಳಂತೆ. ಮಕ್ಕಳ ಮೂಲಕ ನಾವು ನಾಳೆ ನೋಡಬೇಕಿದೆ. ಅವರನ್ನು ಸರಿಯಾದ ದಾರಿಯಲ್ಲಿ ನಡೆಸಿದರೆ ಫಲ ಸಿಗುತ್ತದೆ ಎಂಬುದು ಇವರ ಕನಸು. `ಚಿಕ್ಕಂದಿನಿಂದಲೇ ಅವರಿಗೆ ಬದುಕಿನ ಮೌಲ್ಯಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು' ಎಂದು ತಮ್ಮ ಹಾಡುಗಳ ಹಿಂದಿನ ಕಾರಣವನ್ನು ಬಿಡಿಸಿಟ್ಟರು. ಶಾಲಾ ಕಾಲೇಜುಗಳಿಗೆ ಹೋಗಿ ಮಕ್ಕಳಿಗೆ ತಮ್ಮ ಹಾಡುಗಳನ್ನು ಹಾಡಿ ತೋರಿಸುವ ಶಂಕರ್ ಅವರು ಒಂದಿಷ್ಟೂ ಹಣವನ್ನು ಪಡೆಯುವುದಿಲ್ಲ. `ನನ್ನ ಕಾರ್ಯ ಮಕ್ಕಳಿಗೆ ಉಪಯೋಗಕ್ಕೆ ಬಂದರೆ ಸಾಕು' ಎಂದು ಬರಿಗೈಯಲ್ಲಿ ಹಿಂದಿರುಗುತ್ತಾರೆ. ತಮ್ಮ ಕೆಲಸದಿಂದ ಸಿಗುವ ತೃಪ್ತಿಯನ್ನು ಮಾತ್ರ ಅನುಭವಿಸುತ್ತಾರೆ.

ಮಕ್ಕಳಿಗೆ `ಚಾಕೊಲೇಟ್'
ಮಕ್ಕಳಿಗೆ ಚಾಕೊಲೇಟ್ ಎಂದರೆ ತುಂಬಾ ಇಷ್ಟ. ಅದೇ ಕಾರಣಕ್ಕೆ `ರೈಮ್ಸ'ನಂತಿರುವ ಹಾಡುಗಳನ್ನು `ಚಾಕೊಲೇಟ್ಸ್' ಎಂಬ ಶೀರ್ಷಿಕೆಯಲ್ಲಿ ರಚಿಸಿದ್ದಾರೆ. `ಐ ಲವ್ ಲರ್ನಿಂಗ್, ಲರ್ನಿಂಗ್ ಇಸ್ ಮೈ ಸೋಲ್.... ಹೀಗೆ ಮಕ್ಕಳನ್ನು ಓದಿನೆಡೆಗೆ ಪ್ರೇರೇಪಿಸುವ `ವಿಸ್ಡಮ್ ಚಾಕೊಲೇಟ್ಸ್', `ಬ್ರೇನ್ ಚಾಕೊಲೇಟ್ಸ್' ಎಂಬ ಸಾಲುಗಳನ್ನೂ ಬರೆದಿದ್ದಾರೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೆ ಮತ್ತು ಪೋಷಕರಿಗೂ ಅನ್ವಯಿಸುವ ಮಮ್ಮಿ ಡ್ಯಾಡಿ ಸಾಂಗ್ಸ್, ಸ್ಟೂಡೆಂಟ್ಸ್ ಪ್ಲೆಡ್ಜ್, ಟೀಚರ್ಸ್‌ ಪ್ಲೆಡ್ಜ್ ಅನ್ನೂ ರಚಿಸಿದ್ದಾರೆ. 

ಶಿಕ್ಷಣಕ್ಕೆ ಆದ್ಯತೆ
ತಮ್ಮ ಮನೆಯಿಂದ ಐದಾರು ಕಿಲೋ ಮೀಟರ್ ಅಂತರದ ಶಾಲೆಗಳಿಗೂ ಕಾಲ್ನಡಿಗೆಯಲ್ಲೇ ಭೇಟಿ ನೀಡುವ ಇವರು ಇದುವರೆಗೂ ಸುಮಾರು 328 ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳಿಗೆ ಜ್ಞಾನ ಹೆಚ್ಚಿಸುವ, ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದ್ದಾರೆ. ಇದಕ್ಕೆಂದು ಸರ್ಕಾರದಿಂದ ಅನುಮತಿಯೂ ಇವರ ಬಳಿಯಿದೆ. ಮಕ್ಕಳಲ್ಲಿ ಪರಿಸರದ ಕಾಳಜಿ ಮೂಡಿಸಬೇಕು, ಪ್ರಾಣಿ, ಪಕ್ಷಿ, ಸಸ್ಯಗಳನ್ನು ಅವರು ಪ್ರೀತಿಸುವಂತವರಾಗಬೇಕು ಎಂಬುದು ಇವರ ಬಯಕೆ.

ಪರಿಸರ ಕಾಳಜಿ
ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕು ಎಂಬ ಹಂಬಲದಿಂದ  ಶಂಕರ್ ಸಾ `ಗಾರ್ಬೇಜ್ ಸಾಂಗ್ಸ್' ಬರೆದಿದ್ದಾರೆ. `ಗಾರ್ಬೇಜ್ ಫ್ರೀ, ಗಾರ್ಬೇಜ್ ಫ್ರೀ...' ಎಂಬ ಈ ಸಾಲುಗಳನ್ನು ಅವರು ಹಾಡುತ್ತಿದ್ದರೆ ಎದುರಿಗಿದ್ದವರು ದನಿ ಸೇರಿಸಬೇಕು ಎಂಬಂತಾಗುತ್ತದೆ. ಗಾಂಧೀಜಿ, ಸ್ವಾಮಿ ವಿವೇಕಾನಂದ ಹಾಗೂ ಅಣ್ಣಾ ಹಜಾರೆ ಶಂಕರ್ ಸಾ ಅವರಿಗೆ ಪ್ರೇರಣೆಯಂತೆ. ಇವರ ಈ ಸ್ಫೂರ್ತಿದಾಯಕ ಕಾರ್ಯಕ್ಕೆ ಎರಡು ಬಾರಿ ಕೆಂಪೇಗೌಡ ಪ್ರಶಸ್ತಿಯೂ ಸಂದಿದೆ. ಸಂಪರ್ಕಕ್ಕೆ 32491369.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT