ಬಳ್ಳಾರಿ: ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಸುಮಾರು 700 ಎಕರೆ ಭೂಮಿಯನ್ನು ಭೂರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕೆ ಗುತ್ತಿಗೆ ಆಧಾರದ ಮೇಲೆ ಸಾಗುವಳಿ ಮಾಡಲು ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಚಾಗನೂರು- ಸಿರಿವಾರ ನೀರಾವರಿ ಭೂರಕ್ಷಣಾ ಹೋರಾಟ ಸಮಿತಿ ವತಿಯಿಂದ ಇದೇ 24ರಂದು ಎತ್ತಿನ ಗಳೇವು ಚಳವಳಿ ಹಮ್ಮಿಕೊಳ್ಳಲಾಗಿದೆ.
ಚಾಗನೂರು ರೈತ ಕೂಲಿ ಸಂಘದ ನೇತೃತ್ವದಲ್ಲಿ ಚಳವಳಿ ನಡೆಯಲಿದ್ದು, ಚಾಗನೂರಿನಿಂದ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿವರೆಗೆ ಎತ್ತಿನ ಗಳೇವು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಸಮಿತಿ ಮುಖಂಡ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆಂದು ವಶಪಡಿಸಿಕೊಂಡಿರುವ ಭೂಮಿಯನ್ನು ಬಡ ಕೃಷಿ ಕೂಲಿಕಾರರು ಸಾಗುವಳಿ ಮಾಡಿಕೊಳ್ಳಲು ಅವಕಾಶ ನೀಡಬೇಕು. ವಿಮಾನ ನಿಲ್ದಾಣಕ್ಕಾಗಿ ನಡೆಸಲಾದ ಭೂ ಸ್ವಾಧೀನದ ವಿರುದ್ಧ ಈ ಹಿಂದೆ ಹೋರಾಟ ನಡೆಸಿದ ರೈತರ ವಿರುದ್ಧ ಹೂಡಲಾಗಿದ್ದ ಅಪರಾಧ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಸರ್ಕಾರ ನ್ಯಾಯಾಲಯಗಳಿಗೆ ಅಧಿಸೂಚನೆ ಒದಗಿಸಬೇಕು ಎಂದು ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 7ಕ್ಕೆ ಗ್ರಾಮದಿಂದ ಚಳವಳಿ ಆರಂಭಿಸಿ ಬೂದಿಹಾಳ್, ಗೋಡೆಹಾಳ್ ಕ್ರಾಸ್, ಅಮರಾಪುರ, ಕಕ್ಕಬೇವಿನಹಳ್ಳಿ, ಬೇವಿನಹಳ್ಳಿ, ಬಿಸಿಲಹಳ್ಳಿ ಮಾರ್ಗವಾಗಿ ಬಳ್ಳಾರಿ ತಲುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.