ಮಾಗಡಿ: ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಅವಧಿ ಮೀರಿ ಬಳಸದೆ ಉಳಿದಿರುವ ವಿಷಯುಕ್ತ ಚುಚ್ಚುಮದ್ದಿನ ಬಾಟಲಿಗಳನ್ನು ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಚಾಮರಾಜಸಾಗರ ಜಲಾಶಯಕ್ಕೆ ತಂದು ಎಸೆಯಲಾಗುತ್ತಿದ್ದು, ಇದರಿಂದ ಸುತ್ತಮುತ್ತಲಿನ ಪರಿಸರ ತೀವ್ರ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಚಾಮರಾಜ ಸಾಗರ ಜಲಾಶಯದಲ್ಲಿ ಜಲಮಾಲಿನ್ಯ ಉಂಟಾಗಿದೆ.
ರಾತ್ರಿ ಹಗಲು ಎನ್ನದೆ, ವಾಹನಗಳಲ್ಲಿ ಬೆಂಗಳೂರು ನಗರದಿಂದ ತ್ಯಾಜ್ಯ ವಸ್ತುಗಳನ್ನು ತಂದು ಜಲಾಶಯದ ಹಾಗೂ ಇದರ ಬಳಿಯ ಬೆಟ್ಟಗುಡ್ಡಗಳಲ್ಲಿ ಸುರಿಯಲಾಗುತ್ತಿದೆ.
ನೀರು ಮಲಿನವಾಗುತ್ತಿರುವ ಪರಿಣಾಮ ಜಲಾಶಯದಲ್ಲಿನ ಮೀನುಗಳು ಸಾಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.