ಕೋಲಾರ: ದೇಶಿ ವಿದ್ವಾಂಸರು ಗುರುತಿಸಿರುವಂತೆ ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆಯ ಕೊರತೆ ಇದೆ ಎಂದು ವಿಜ್ಞಾನ ಕಾರ್ಯಕರ್ತರ ವಿ.ಎಸ್.ಎಸ್.ಶಾಸ್ತ್ರಿ. ಅಭಿಪ್ರಾಯಪಟ್ಟರು.
ಆದಿಮ ಸಾಂಸ್ಕೃತಿಕ ಸಂಘಟನೆ ಆವರಣದಲ್ಲಿ ಬೆಂಗಳೂರಿನ ಆರ್ಪಿಎ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿದ್ದ ಎನ್ಎಸ್ಎಸ್ ವಿಶೇಷ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.
ವಿಶ್ವದಲ್ಲಿಯೇ ಸಂಪದ್ಭರಿತವಾದ ಸಂಸ್ಕೃತಿ ಹಾಗೂ ಚರಿತ್ರೆ ದೇಶದಲ್ಲಿದೆ. ಆದರೆ ಸರಿಯಾದ ಚಾರಿತ್ರಿಕ ಪ್ರಜ್ಞೆ ಇಲ್ಲದಿರುವುದರಿಂದ ಇತಿಹಾಸ ಸಮರ್ಪಕವಾಗಿ ಗ್ರಹಿಸಲು ಮತ್ತು ಕಟ್ಟಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.ವಿಶ್ವದಲ್ಲಿಯೇ ಉತ್ತಮ ಆಡಳಿತವನ್ನು ನೀಡಿದ, ಭಾಷಾಪಂಡಿತನಾಗಿದ್ದ ಟಿಪ್ಪು ಸುಲ್ತಾನ್ ತನ್ನ ಸಂಸ್ಥಾನದ ಸೇನಾ ತುಕಡಿಗಳ ನಡುವೆ ಸಮನ್ವಯ ಇಲ್ಲದ್ದರಿಂದ ಸೋಲನ್ನು ಅನುಭವಿಸಬೇಕಾಯಿತು. ಬ್ರಿಟಿಷರ ಎಂಟನೇ ಸೇನಾ ತುಕಡಿಯಲ್ಲಿದ್ದ ಭಾರತೀಯ ಯೋಧರಿಂದಾಗಿ ದೇಶವು ಮುಂಚಿತವಾಗಿಯೇ ಸ್ವಾತಂತ್ರ್ಯವನ್ನು ಗಳಿಸಲು ಸಾಧ್ಯವಾಯಿತು. ಅದನ್ನು ಇತಿಹಾಸಕಾರರು ಸರಿಯಾಗಿ ಗಮನಿಸಬೇಕಾಗಿದೆ ಎಂದರು.
ನಗರದ ಶತಶೃಂಗ ಪರ್ವತವು ಆದಿಮಾನವರ ವಾಸಸ್ಥಾನನವಾಗಿತ್ತು ಎಂಬುದಕ್ಕೆ ಕೆಲವು ಕುರುಹುಗಳು ದೊರಕಿವೆ ಎಂದ ಅವರು, ಶಿಲಾಯುಗದ ಮಾನವರು ಬಳಸುತ್ತಿದ್ದ ಆಯುಧಗಳನ್ನು ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿದರು. ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಡಾ.ಜಿ. ಶಿವಪ್ಪ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು.
ಕಲಾವಿದ ಎನ್.ಕೆ. ವರದರಾಜ್ ಉಪನ್ಯಾಸ ನೀಡಿದರು.ಬಾಲಕರ ಸರ್ಕಾರಿ ಕಾಲೇಜಿನ ಕನ್ನಡ ಅಧ್ಯಾಪಕ ಸಿ.ಎ. ರಮೇಶ್ ಹನಿಗವಿತೆ ಓದಿದರು. ಶಿಬಿರಾಧಿಕಾರಿ ಟಿ. ಗೋವಿಂದರಾಜ್, ಕನ್ನಡ ಉಪನ್ಯಾಸಕ ರುದ್ರೇಶ್.ಬಿ. ಆದರಂಗಿ ವೇದಿಕೆಯಲ್ಲಿದ್ದರು.ಅನಿಲ್ ಸ್ವಾಗತಿಸಿದರು. ದೇವಿ ಸುಶ್ಮಾ ವಂದಿಸಿದರು.