ಕೋಲ್ಕತ್ತ (ಪಿಟಿಐ): ಕಾನೂನು ತರಬೇತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ, ತಮ್ಮ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆಪಾದಿಸಿದ್ದಾರೆ. ಜೊತೆಗೆ, ಸುಪ್ರೀಂ ಕೋರ್ಟ್ನ ವಿಚಾರಣಾ ಸಮಿತಿ ರಚನೆಯ ಔಚಿತ್ಯವನ್ನೂ ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಪಿ.ಸದಾಶಿವಂ ಅವರಿಗೆ 36 ಅಂಶಗಳನ್ನು ಉಲ್ಲೇಖಿಸಿ ಎಂಟು ಪುಟಗಳ ಪತ್ರ ಬರೆದಿರುವ ಗಂಗೂಲಿ, ‘ನಾನು ಯಾವುದೇ ಕಾನೂನು ತರಬೇತಿ ವಿದ್ಯಾರ್ಥಿನಿಗೂ ಕಿರುಕುಳ ನೀಡಿಲ್ಲ ಮತ್ತು ಅನುಚಿತವಾಗಿ ವರ್ತಿಸಿಲ್ಲ. ಈ ಆರೋಪ ಮತ್ತು ಇದರಿಂದ ಉದ್ಭವಿಸಿರುವ ಬೆಳವಣಿಗೆಗಳಿಂದ ತೀವ್ರವಾಗಿ ನೊಂದಿದ್ದೇನೆ. ನಿಮ್ಮ (ಸಿಜೆಐ ಸದಾಶಿವಂ) ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಪ್ರೀಂ ಕೋರ್ಟ್ ಕೂಡ ನನ್ನನ್ನು ಗೌರವದಿಂದ ನಡೆಸಿಕೊಂಡಿಲ್ಲ’ ಎಂದಿದ್ದಾರೆ.
‘ಕೆಲವು ಪ್ರಕರಣಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾದ ತೀರ್ಪು ನೀಡಿದ್ದರಿಂದ ನನ್ನ ಚಾರಿತ್ರ್ಯಕ್ಕೆ ಮಸಿ ಬಳಿಯುವ ವ್ಯವಸ್ಥಿತ ಪ್ರಯತ್ನ ನಡೆಯುತ್ತವೆ. ನನ್ನನ್ನು ಅವಹೇಳನ ಮಾಡುವುದೇ ಈ ಹಿತಾಸಕ್ತಿಗಳ ಉದ್ದೇಶ ಎಂಬುದು ಸ್ಪಷ್ಟ’ ಎಂದು ಆಪಾದಿಸಿದ್ದಾರೆ.
‘ನನ್ನ ಮೇಲೆ ಆಪಾದನೆ ಮಾಡಿರುವ ವಿದ್ಯಾರ್ಥಿನಿಯು ಸುಪ್ರೀಂ ಕೋರ್ಟ್ನಲ್ಲಿ ವಕೀಲ ವೃತ್ತಿ ಮಾಡಲು ನೋಂದಾಯಿಸಿಕೊಂಡವರಲ್ಲ ಮತ್ತು ನಾನು ಸೇವೆಯಿಂದ ನಿವೃತ್ತಿಯಾಗಿದ್ದ ಕಾರಣ ಈ ಆರೋಪದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸುವ ಅಗತ್ಯವಿರಲಿಲ್ಲ’ ಎಂದು ಹೇಳಿದ್ದಾರೆ.
‘ಈ ಸಮಿತಿ ರಚನೆಗೆ ಪೂರ್ವದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ನನ್ನ ವಿರುದ್ಧ ಸುಪ್ರೀಂ ಕೋರ್ಟ್ಗೆ ಯಾವ ದೂರೂ ಸಲ್ಲಿಕೆ ಆಗಿರಲಿಲ್ಲ. ಬಹುಶಃ ವಿಚಾರಣಾ ಸಮಿತಿ ಸೂಚನೆಯ ಮೇರೆಗೆ ವಿದ್ಯಾರ್ಥಿನಿ ಹೇಳಿಕೆ ನೀಡಿರಬಹುದು’ ಎಂದಿದ್ದಾರೆ.
‘ಡಿ.12ರಂದು ವೃತ್ತಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ (ಲೈಂಗಿಕ ಕಿರುಕುಳದ ಆರೋಪ) ಸತ್ಯಾಸತ್ಯತೆ ಪರಿಶೀಲಿಸದೆ ಈ ಸಮಿತಿ ರಚಿಸಲಾಯಿತು. ಅಟಾರ್ನಿ ಜನರಲ್ ಅವರು ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಅವರ ಗಮನಕ್ಕೆ ತಂದರು ಎಂಬ ಕಾರಣಕ್ಕೆ ಈ ಸಮಿತಿ ರಚಿಸಲಿಲ್ಲ. ಅದೂ ಅಲ್ಲದೆ ಈ ಆರೋಪವು ಮೊದಲಿಗೆ ಅಂತರ್ಜಾಲದ ಬ್ಲಾಗ್ ತಾಣದಲ್ಲಿ ಕೇಳಿಬಂತು. ಅದರಲ್ಲಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು.
ಆದರೂ ಆರೋಪಿತರು ಹಾಲಿ ನ್ಯಾಯಮೂರ್ತಿಯೇ ಎಂಬುದನ್ನು ತಿಳಿಯುವುದಕ್ಕಾಗಿ ಈ ಸಮಿತಿ ರಚಿಸಲಾಗಿದೆ ಎಂದು ಸಮಿತಿ ರಚನೆಯ ಸಂದರ್ಭದಲ್ಲಿ ಹೇಳಲಾಗಿದೆ’ ಎಂದು ಗಂಗೂಲಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ನ ಅಧಿಕಾರಿಗಳ ವರ್ತನೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಗಂಗೂಲಿ, ‘ನಾನು ಬಂಧಿತ ವ್ಯಕ್ತಿ ಎನ್ನುವಂತೆ ಅಧಿಕಾರಿ ವರ್ಗದವರೂ ನನ್ನ ಸುತ್ತ ಸುತ್ತುವರೆದಿದ್ದರು. ಇಂತಹ ವರ್ತನೆ ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಭೂಷಣವೇ’ ಎಂದು ಪ್ರಶ್ನಿಸಿದ್ದಾರೆ.
ಈ ಆರೋಪದ ಬಗ್ಗೆ ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆ ನಡೆಯುತ್ತಿರುವ ಕಾರಣ ತಾವು ಮೌನ ಮುರಿದು ಪ್ರತಿಕ್ರಿಯಿಸಬೇಕಾಯಿತು ಎಂದು ಪಶ್ಚಿಮ ಬಂಗಾಳದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರೂ ಆಗಿರುವ ಗಂಗೂಲಿ ತಿಳಿಸಿದ್ದಾರೆ. ಜೊತೆಗೆ, ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದ ಪ್ರತಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೂ ಕಳುಹಿಸಿರುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.