ಚಿಂಚೋಳಿ: ’ಚುನಾವಣಾ ಆಯೋಗದಿಂದ ಏ.8ರಿಂದ 11ವರೆಗೆ ಮತದಾರರ ಚೀಟಿಗಳ ವಿತರಣೆ ನಡೆಯಲಿದೆ. ಕಣದಲ್ಲಿ ಇರುವ ಅಭ್ಯರ್ಥಿಗಳಿಗೆ ಮತ ನೀಡಲು ಇಷ್ಟವಿಲ್ಲದವರು ಮತಯಂತ್ರದಲ್ಲಿ ನೋಟಾ ಮುಂದಿನ ನೀಲಿ ಬಟನ್ ಒತ್ತುವ ಸೌಲಭ್ಯ ವಿರುವುದನ್ನು ಮತದಾರರ ಗಮನಕ್ಕೆ ತರಬೇಕು’ಎಂದು ಸಹಾಯಕ ಚುನಾವಣಾಧಿಕಾರಿ ಮಂಜುನಾಥ ತಿಳಿಸಿದರು.
ಸೋಮವಾರ ಇಲ್ಲಿನ ಸಿ.ಬಿ.ಪಾಟೀಲ ಪದವಿ ಕಾಲೇಜಿನಲ್ಲಿ ನಡೆದ ಬಿಎಲ್ಒಗಳಿಗೆ ಪ್ರತಿಜ್ಞಾವಿಧಿ ಬೋಧನೆ ಮತ್ತು ಮತಗಟ್ಟೆಯ ಮತದಾರರ ಚೀಟಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
’ಅಂಗನವಾಡಿ ಕಾರ್ಯಕರ್ತೆಯರಾದ ಬಿಎಲ್ಒಗಳು ನಿತ್ಯ ಹಂಚಿಕೆ ಮಾಡಿದ ಮತದಾರರ ಚೀಟಿಗಳ ವಿವರವನ್ನು ಗ್ರಾಮ ಲೆಕ್ಕಾಧಿಕಾರಿ ಇಲ್ಲವೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೀಡಬೇಕು. ಕೊನೆಯದಾಗಿ ಏ.11 ರಂದು ಸಂಜೆ 5 ಗಂಟೆಯವರೆಗೆ ಇವುಗಳನ್ನು ವಿತರಿಸಿ, ಉಳಿದ ಚೀಟಿಗಳು ಹಿಂತಿರುಗಿಸಬೇಕು ಮತ್ತು ಅವುಗಳಿಗೆ ಕಾರಣವನ್ನು ನೀಡಬೇಕು’ ಎಂದು ತಿಳಿಸಿದರು.
’ವಲಸೆ, ಸ್ಥಳಾಂತರ, ಮರಣ, ದ್ವಿಮುದ್ರಣದ ಮತಚೀಟಿ ಮರಳಿಸಬೇಕು. ಮತದಾರರು ಬಿಎಲ್ಒಗಳು ನೀಡಿದ ಮತದಾರರ ಚೀಟಿಯೊಂದಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಬಹುದು. ಅಲ್ಲಿ ಮತದಾರರ ಚೀಟಿಯ ಜರಾಕ್ಸ್ ಬಳಸುವಂತಿಲ್ಲ’ ಎಂದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಾದ ಬೀದರ್ ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕ ಮತಿವಣ್ಣನ್, ವೀಕ್ಷಕ ಎ.ಬಿ.ದೇಶಪಾಂಡೆ, ಪ್ರಾಚಾರ್ಯ ಜಿ.ಜಿ.ಗೌಡಪಗೋಳ್, ತಹಶೀಲ್ದಾರ ಮೋಹನ ಜೋಷಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುಭಾಷ್ಚಂದ್ರ ಟಕ್ಕಳಕಿ, ಪ.ಪಂ. ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮೊದಲಾದವರು ಇದ್ದರು.
ಬಿಎಲ್ಒಗಳ ಅಳಲು:’ನಮಗೆ ನೀಡಿದ ಮತದಾರರ ಚೀಟಿಗಳಲ್ಲಿ ಬದಲಾವಣೆಗಳನ್ನು ಸರಿಯಾಗಿ ನಮೂದಿಸಿಲ್ಲ. ಮೃತರಾದ ತಂದೆಯ ಹೆಸರು ತೆಗೆದುಹಾಕಲು ಕೋರಿದ್ದರೆ, ತಂದೆ ಮಗ ಇಬ್ಬರ ಹಸರುಗಳನ್ನು, ಗಂಡ ಮರಣ ಹೊಂದಿದ್ದರೆ ಗಂಡ –ಹೆಂಡತಿ ಇಬ್ಬರ ಹೆಸರುಗಳನ್ನು, ಅಣ್ಣನ ಹೆಸರು ತೆಗೆದುಹಾಕಲು ಕೋರಿದ್ದರೆ ಅಣ್ಣತಮ್ಮ – ಇಬ್ಬರ ಹೆಸರುಗಳನ್ನು ತೆಗೆದುಹಾಕಲಾಗಿದೆ . ಇದರಿಂದ ಮತದಾರರ ಚೀಟಿಗಳನ್ನು ವಿತರಿಸುವಾಗ ಜಗಳಗಳು ನಡೆಯುತ್ತಿವೆ’ ಹತ್ತಾರು ಬಿಎಲ್ಒಗಳು ಅಳಲು ತೋಡಿಕೊಂಡರು.
ಮತಪತ್ರ ಜೋಡಣೆ:ಮತಯಂತ್ರಗಳಿಗೆ ಮತಪತ್ರ ಜೋಡಣೆಯನ್ನು ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವೀಕ್ಷಕ ಮತಿವಣ್ಣನ್, ಸಹಾಯಕ ಚುನಾವಣಾಧಿಕಾರಿ ಮಂಜುನಾಥ,ಎ.ಬಿ.ದೇಶಪಾಂಡೆ, ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಪಾಲಾಮೂರು, ಮೋಹನ ಜೋಷಿ, ಮೊದಲಾದವರ ಸಮ್ಮುಖದಲ್ಲಿ ನಡೆಯಿತು. ಖಾಲಿದ್ ಅಹ್ಮದ್, ಶಮ್ಮಿ, ಕಂದಾಯ ನಿರೀಕ್ಷಕ ಸುಭಾಷ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.