ಚಿಂತಾಮಣಿ: ಜಿಲ್ಲೆಯಲ್ಲೇ ಅತ್ಯಂತ ಹೆಚ್ಚಿನ ಕೃಷಿ ವ್ಯಾಪಾರ ವಹಿವಾಟು ನಡೆಯುವುದು ಎಂಬ ಹೆಗ್ಗಳಿಕೆ ಚಿಂತಾಮಣಿ ರೈತರ ವ್ಯವಸಾಯೋತ್ಪನ್ನ ಮಾರುಕಟ್ಟೆಗೆ ಇದೆ. ಆದರೆ ಇಲ್ಲಿನ ಸ್ವಚ್ಛತೆ ಕೊರತೆ, ಮಧ್ಯವರ್ತಿಗಳ ಹಾವಳಿಯಿಂದ ಗ್ರಾಹಕರು, ರೈತರು ಪರಿತಪಿಸುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಆವರಣ ಕಸದ ತೊಟ್ಟಿಯಾಗಿ ಮಾರ್ಪಡಾಗಿದೆ. ದಿನನಿತ್ಯದ ವಹಿವಾಟುಗಳಿಗೆ ಆಗಮಿಸುವ ನಾವು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದಿನದೂಡುವಂತಾಗಿದೆ~ ಎಂದು ಅಲವತ್ತು ಕೊಳ್ಳುತ್ತಾರೆ ರೈತರು.
ಮಳೆ ಬಂದರಂತೂ ಮಾರುಕಟ್ಟೆ ಆವರಣದಲ್ಲಿ ಹೆಜ್ಜೆ ಇಡಲೂ ಆಗುವುದಿಲ್ಲ.ಟೊಮೆಟೊ, ಜಾನುವಾರು, ದಿನಸಿ ಮಾರುಕಟ್ಟೆ ಸ್ಥಳಗಳು ತಿಪ್ಪೆಗುಂಡಿಯಂತಾಗುತ್ತವೆ. ಕೊಳೆತ ತರಕಾರಿ, ಟೊಮೆಟೊ ರಸ್ತೆಯಲ್ಲೆ ಸುರಿಯುವುದರಿಂದ ರೋಗಗಳ ಭೀತಿ ಎದುರಾಗಿದೆ.ತಾಲ್ಲೂಕಿನಾದ್ಯಂತ ಡೆಂಗೆ, ಚಿಕುನ್ಗುನ್ಯಾ, ಮಲೇರಿಯಾ ಅಂತಹ ವಿಷಮ ಜ್ವರಗಳು ವ್ಯಾಪಕವಾಗಿ ಹರಡುತ್ತಿವೆ.
ಇದರ ನಿರ್ವಹಣೆ ಹೊತ್ತಿರುವ ಗುತ್ತಿಗೆದಾರ ಮತ್ತು ಮಾರುಕಟ್ಟೆ ಅಧಿಕಾರಿಗಳು ಇದರತ್ತ ಗಮನ ಹರಿಸದಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ.
ಜನಪ್ರತಿನಿಧಿಗಳು ಸಾಕಷ್ಟು ಶ್ರಮವಹಿಸಿ ಮಾರುಕಟ್ಟೆ ಅಭಿವೃದ್ಧಿಗೊಳಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುಃಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಮಧ್ಯವರ್ತಿಗಳ ಹಾವಳಿ ಮೀತಿಮೀರಿದೆ ಎನ್ನುತ್ತಾರೆ ರೈತ ಮುಖಂಡರು.
ಕಮೀಷನ್ ವಸೂಲಿ: ಅಧಿಕಾರಿಗಳು ಕಮೀಷನ್ ಏಜೆಂಟ ಹಾಗೂ ವ್ಯಾಪಾರಿಗಳೊಂದಿಗೆ ಮಾಮಾಲಿ ವಸೂಲಿಗೆ ಮಾತ್ರ ಬರುತ್ತಾರೆ. ಉಳಿದಂತೆ ಈ ಕಡೆ ತಲೆ ಹಾಕುವುದಿಲ್ಲ.
ರೈತರಿಂದ ಕಮೀಷನ್ ಪಡೆಯಬಾರದು ಎಂದು ಆದೇಶವಿದ್ದರೂ ಕಮೀಷನ್ ಪಡೆಯುತ್ತಿದ್ದಾರೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ತೂಕದಲ್ಲಿ ಮೋಸ: ರೈತರು ತರುವ ಉತ್ಪನ್ನಗಳನ್ನು ಸರಿಯಾಗಿ ಹರಾಜನ್ನು ಕೂಗುವುದಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಹಾರಿಕೆ ಉತ್ತರ ನೀಡುತ್ತಾರೆ ಎನ್ನುವುದು ರೈತರ ಆರೋಪ. ಮೂಲಸೌಕರ್ಯಗಳನ್ನು ಕೂಡಲೇ ಕಲ್ಪಿಸಲು ರೈತರು ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಆಗ್ರಹ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.