ಬೆಂಗಳೂರು: ಆರ್ಥಿಕ ತೊಂದರೆ ಕಾರಣ ಮಗಳಿಗೆ ಉತ್ತಮ ಶ್ರವಣ ಸಾಧನ ಕೊಡಿಸಲು ಸಾಧ್ಯವಾಗದೆ ಕೊರಗುತ್ತಿದ್ದ ಜಯನಗರ ನಿವಾಸಿ ಎಸ್.ವಿ. ಆಂಜನೇಯುಲು ದಂಪತಿಯ ಮುಖದಲ್ಲಿ ಮಂಗಳವಾರ ಮಂದಹಾಸ ಮೂಡಿತ್ತು.
ಮಗಳು ದೀಪ್ತಿಗೆ ಉತ್ತಮ ಶ್ರವಣ ಸಾಧನ ಮತ್ತು ಅವಳ ಚಿಕಿತ್ಸೆಯ ವೆಚ್ಚ ಭರಿಸಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು `ಜನತಾ ದರ್ಶನ~ದ ವೇಳೆ 1.12 ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದ್ದು ದಂಪತಿಯ ಆನಂದಕ್ಕೆ ಕಾರಣವಾಗಿತ್ತು.
ಜಯನಗರದ 4 `ಟಿ~ ಬ್ಲಾಕ್ನಲ್ಲಿ ಸಂಬಾರ ಪದಾರ್ಥಗಳ ಅಂಗಡಿ ಇಟ್ಟುಕೊಂಡಿರುವ ಆಂಜನೇಯುಲು ಅವರ ಪುತ್ರಿ ದೀಪ್ತಿ ಶ್ರವಣ ಸಮಸ್ಯೆ ಎದುರಿಸುತ್ತಿದ್ದಾಳೆ. ಅವಳ ಚಿಕಿತ್ಸೆಗೆ ಮುಖ್ಯಮಂತ್ರಿಗಳಿಂದ ಸಹಾಯ ಕೋರಲು ಮಂಗಳವಾರದ `ಜನತಾ ದರ್ಶನ~ ಕಾರ್ಯಕ್ರಮಕ್ಕೆ ಆಂಜನೇಯುಲು ಬಂದಿದ್ದರು.
ದೀಪ್ತಿಯ ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು ಅವಳಿಗೆ ಆಧುನಿಕ ಶ್ರವಣ ಸಾಧನ ಕೊಳ್ಳಲು ಮತ್ತು ಚಿಕಿತ್ಸೆಯ ವೆಚ್ಚ ಭರಿಸಲು 1.12 ಲಕ್ಷ ರೂಪಾಯಿ ನೀಡುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.
`ಮುಖ್ಯಮಂತ್ರಿಗಳು ಜನತಾ ದರ್ಶನದ ವೇಳೆ ಸಾಮಾನ್ಯವಾಗಿ ರೂ 75 ಸಾವಿರಗಿಂತ ಹೆಚ್ಚು ಮೊತ್ತದ ಧನ ಸಹಾಯ ಬಿಡುಗಡೆ ಮಾಡುವುದಿಲ್ಲ. ಆದರೆ ದೀಪ್ತಿಯ ಸಮಸ್ಯೆಯನ್ನು ನೋಡಿದ ಅವರು ಇದೇ ಮೊದಲ ಬಾರಿ ಇಷ್ಟು ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡಿದ್ದಾರೆ~ ಎಂದು ಅಧಿಕಾರಿಯೊಬ್ಬರು ತಿಳಿಸಿದರು.