ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರದಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Last Updated 27 ಜನವರಿ 2012, 12:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಾರ್ಯೋನ್ಮುಖವಾಗಿದ್ದು, ಜಿ. ಎಸ್.ಪರಶಿವಯ್ಯ ವರದಿ ಆಧಾರಿತ ಯೋಜನೆ ಅಥವಾ ಎತ್ತಿನಹೊಳೆ ಯೋಜನೆ ಸೂಕ್ತವೇ ಎಂಬುದರ  ಬಗ್ಗೆ ಚಿಂತನೆ ನಡೆಸಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, `ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭರವಸೆ ನೀಡಿದ್ದಾರೆ~ ಎಂದರು.

`ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸಂಸದರನ್ನು, ಶಾಸಕರನ್ನು, ಜನಪ್ರತಿನಿಧಿಗಳನ್ನು. ರೈತ ಮುಖಂಡರನ್ನು ಸಭೆಗೆ ಆಹ್ವಾನಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಮಂತ್ರಿಯವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಯಾರೂ ಆತಂಕಪಡಬೇಕಿಲ್ಲ. ಹೆಚ್ಚಿನ ಬೇಡಿಕೆ ವ್ಯಕ್ತವಾಗುವ ಯೋಜನೆಯನ್ನೇ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು~ ಎಂದು  ತಿಳಿಸಿದರು.

ನಾಲ್ಕು ಪುಟಗಳ ಸಿದ್ಧ ಭಾಷಣದ ಪ್ರತಿ ವಾಚಿಸದೇ ಮುಕ್ತವಾಗಿ ಮಾತನಾಡಿದ ಅವರು, `ಜಿಲ್ಲಾ ಸಮುಚ್ಚಯ ಕಟ್ಟಡಗಳ ಸಂಕೀರ್ಣಕ್ಕೆ 25 ಕೋಟಿ ರೂಪಾಯಿ, ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 6.75 ಕೋಟಿ, ಚಿತ್ರಾವತಿ ಜಲಾಶಯದಿಂದ ನೀರು ಪೂರೈಕೆಗೆ ರೂ.20 ಕೋಟಿ,  ನಂದಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 18 ಕೋಟಿ ರೂಪಾಯಿ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ~ ಎಂದರು.

`ರಾಜ್ಯ, ಜಿಲ್ಲೆ ಮತ್ತು ಸಮಾಜದ ಅಭಿವೃದ್ಧಿಗೆ ಸರ್ಕಾರವೊಂದೇ ಶ್ರಮಿಸಿದರೆ ಸಾಲದು, ಸರ್ಕಾರೇತರ ಸಂಘಸಂಸ್ಥೆಗಳು ಮತ್ತು ಸಂಘಟನೆಗಳು ಸಹ ಕೈಜೋಡಿಸಬೇಕು. ಸರ್ಕಾರಿ ಕಾರ್ಯಗಳ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಭಾಗಿತ್ವ ಇರಬೇಕು. ಉತ್ತಮ ಸಮಾಜಕ್ಕೆ ಕಪ್ಪು ಚುಕ್ಕೆಗಳಂತಿರುವ ಬಡತನ, ದಾರಿದ್ರ್ಯತನ ಮುಂತಾದವುಗಳನ್ನು ಹೋಗಲಾಡಿಸಬೇಕು. ಎಲ್ಲರೂ ನೆಮ್ಮದಿಯಾಗಿ ಜೀವನ ಮಾಡುವಂತಹ ವಾತಾವರಣ ನಿರ್ಮಾಣವಾಗಬೇಕು~ ಎಂದು  ತಿಳಿಸಿದರು.

ಇದಕ್ಕೂ ಮುನ್ನ ನಾರಾಯಣಸ್ವಾಮಿ ಪಥ ಪರಿವೀಕ್ಷಣೆ ಮಾಡಿದರು. ನಂತರ ಪೊಲೀಸ್ ಸಿಬ್ಬಂದಿಗಳು ಮತ್ತು ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದರು. ಫುಟ್‌ಬಾಲ್ ತರಬೇತುದಾರ ಮುಷ್ತಾಕ್ ಅಹಮದ್, ಯುವಪ್ರಶಸ್ತಿ ಪುರಸ್ಕೃತ ಮಂಜುನಾಥ್, ಗೃಹರಕ್ಷಕ ದಳದ ಸಿಬ್ಬಂದಿಗಳಾದ ಕೆ.ಪಿ.  ನಾಗರಾಜ್, ಬಿ.ಎಫ್.ಮೆಹಬೂಬ್ ಮತ್ತು ಯೋಗಾಪಟು ಆರ್.ಸಿ.ಪ್ರಿಯಾಂಕಾ ಅವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಪಿ.ಬಚ್ಚೇಗೌಡ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ. ಜಿಲ್ಲಾ ಎಸ್ಪಿ ಡಾ. ಟಿ.ಡಿ.ಪವಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಬಿ.ಎಸ್.ಶೇಖರಪ್ಪ, ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಸದಸ್ಯ ಮುನೇಗೌಡ, ತಾಲ್ಲೂಕು ಪಂಚಾ ಯಿತಿ ಪ್ರಭಾರಿ ಅಧ್ಯಕ್ಷ ವೆಂಕಟ               ನಾರಾಯಣಪ್ಪ, ತಹಶೀಲ್ದಾರ್ ಡಾ.ಎನ್. ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಪಥಸಂಚಲನ: ಪಾಲ್ಗೊಂಡ ಶಾಲೆಗಳು
ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸರ್ ಎಂ.ವಿ.ಸ್ಮಾರಕ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗ, ಸರ್ಕಾರಿ ಪ್ರೌಢಶಾಲೆಯ ಸೇವಾ ದಳ ವಿಭಾಗ, ನ್ಯೂ ಹೊರೈಜೊನ್ ಶಾಲೆ, ಬಾಲಕಿಯರ ಪ್ರೌಢಶಾಲೆ, ಗುಡ್‌ಶೆಪರ್ಡ್ ಶಾಲೆ, ಇಂಡಿಯನ್ ಪಬ್ಲಿಕ್ ಶಾಲೆ, ಪಂಚಗಿರಿ ಬೋಧನಾ ಪ್ರೌಢಶಾಲೆ ಮತ್ತು ವಾದ್ಯತಂಡ, ಪೂರ್ಣಪ್ರಜ್ಞಾ ಶಾಲೆ, ಸರ್ ಎಂ.ವಿ.ಸ್ಮಾರಕ ಶಾಲೆ, ಸೇಂಟ್ ಜೋಸೆಫ್ ಶಾಲೆ ಮತ್ತು ಕೆ.ವಿ.ಕನ್ನಡ ಶಾಲೆ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ  ಭಾಗವಹಿಸಿದ್ದರು.

ಪ್ರಶಸ್ತಿ ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ತೋರಿದ ಮಕ್ಕಳಿಗೆ ಗುರುವಾರ ನಡೆದ ಗಣರಾಜ್ಯೋತ್ಸವ ದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು.  ನಾಲ್ಕು ಮಕ್ಕಳಿಗೆ ಸಚಿವ ಎ.ನಾರಾಯಣಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು. ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೆ ಚಿಕ್ಕಬಳ್ಳಾಪುರದ ಶುಭಶ್ರೀ, ಆರ್.ಅಭಿಷೇಕ್, ಕಲಾ ಕ್ಷೇತ್ರದಲ್ಲಿ ಶಿಡ್ಲಘಟ್ಟದ ಲಕ್ಷ್ಮಿ ಯಾದವ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಚಿಂತಾಮಣಿಯ ಮಹಮ್ಮದ್ ಅಲಿಯವರು ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT