ವಿಜಾಪುರ: `ಆಜಾನ~ ಎಂಬ ಪವಿತ್ರವಾದ ಧಾರ್ಮಿಕ ಪದದ ಉಪಯೋಗವನ್ನು ಒಂದು ಅಶ್ಲೀಲ ಚಿತ್ರಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಹಾಗೂ ಆ ಚಿತ್ರದ ಬಿಡುಗಡೆ ತಡೆಯುವಂತೆ ಒತ್ತಾಯಿಸಿ ವಿವಿಧ ಧಾರ್ಮಿಕ ಮತ್ತು ಪ್ರಗತಿಪರ ಸಂಘಟನೆಯವರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಚಲನಚಿತ್ರದ ಪ್ರಚಾರ ಪತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರೊ.ಅಸ್ಲಂ ಮುಜಾವರ ಮಾತನಾಡಿ, ಇಸ್ಲಾಂ ಧರ್ಮದ ಪವಿತ್ರ ಧಾರ್ಮಿಕ ಪದವಾದ `ಅಜಾ~ ಸರ್ವ ಧರ್ಮದ ಜನರಿಗೆ ದೇವರನ್ನು ಪ್ರಾರ್ಥಿಸಲು ಕರೆಯುವ ಶಬ್ದವಾಗಿದೆ. ಈ ಪದವನ್ನು ಈ ದೇಶದ ಕೋಮುವಾದಿ ಶಕ್ತಿಗಳು, ಚಲನಚಿತ್ರ ವಾಣಿಜ್ಯ ಮಂಡಳಿಯವರು ಒಂದು ಅಶ್ಲೀಲ ಚಿತ್ರಕ್ಕೆ ಹೆಸರಿಸಿರುವುದು ಸರ್ವಧರ್ಮದವರಿಗೆ ನೋವುಂಟು ಮಾಡಿದೆ.
ಈ ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಈ ಚಲನಚಿತ್ರ ನಿಷೇಧಿಸದಿದ್ದರೆ ಮತ್ತು ವಿಜಾಪುರ ನಗರದ ಯಾವುದೇ ಚಿತ್ರಮಂದರದಲ್ಲಿ ಚಿತ್ರ ಪ್ರದರ್ಶಿಸಿದರೆ ಜಿಲ್ಲೆಯ ಎಲ್ಲ ಸಂಘಟನೆಗಳೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಫಯಾಜ್ ಮುಶ್ರಿಫ್, ಎಸ್.ಎಂ. ಪಾಟೀಲ ಗಣಿಹಾರ, ವಸಿವುಜ್ಜಮಾ ಹತ್ತರಕಿಹಾಳ, ಆನಂದ ಔದಿ, ಸಜ್ಜಾದ ಮುಶ್ರಿಫ್, ಜಿತೇಂದ್ರ ಕಾಂಬಳೆ, ಮಹಾಬರಿ, ಅಡಿವೆಲ್ಲ ಸಾಲಗಲ್, ಹಮೀದ್ ಮುಶ್ರಿಫ್, ಪೀಟರ್ ಅಲೆಕ್ಝಾಂಡರ್, ಎಲ್.ಎಲ್. ಉಸ್ತಾದ, ಅಲ್ತಾಫ್ ಲಕ್ಕುಂಡಿ, ಯಾಕೂಬ ಕೋಪರ, ಮುಕ್ತಾರ ದಖನಿ, ಮೈನೂದ್ದೀನ್ ಬೀಳಗಿ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ಮನವಿ ಸಲ್ಲಿಸಲಾಯಿತು.
ಎನ್ಎಸ್ಎಸ್ ಶಿಬಿರ: ವಿಜಾಪುರದ ಸಿಕ್ಯಾಬ್ ಸಂಸ್ಥೆಯ ಬಾಲಕರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಆಸ್ಪತ್ರೆಯ ದಂತ ವೈದ್ಯ ಡಾ.ಇಮ್ತಿಯಾಜ್ ಕೋತ್ವಾಲ್, ಜೀವನ ಶೈಲಿಯಲ್ಲಿಯ ಕೆಲ ಬದಲಾವಣೆಗಳೊಂದಿಗೆ ಉತ್ತಮ ದಂತ ಆರೋಗ್ಯ ಮತ್ತು ಸೌಂದರ್ಯ ಪಡೆದುಕೊಳ್ಳಬಹುದು. ದಂತ ರೋಗಗಳನ್ನು ನಿರ್ಲಕ್ಷಿಸಬಾರದು. ತಂಬಾಕು ಉತ್ಪನ್ನಗಳ ಸೇವನೆ ಹಣಕೊಟ್ಟು ರೋಗಗಳನ್ನು ಆಹ್ವಾನಿಸಿಕೊಂಡಂತೆ ಎಂದರು.
ಪ್ರಾಚಾರ್ಯ ಎನ್.ಎಸ್. ಭೂಸನೂರ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಅಧಿಕಾರಿ ಎ.ಎಲ್. ನಾಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎನ್. ರಿಸಾಲ್ದಾರ ಕಾರ್ಯಕ್ರಮ ನಿರೂಪಿಸಿದರು. ಎಸ್.ಬಿ. ಗೋಗಿ ವಂದಿಸಿದರು. 50 ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.