ಚಿತ್ರದುರ್ಗ: ಎಂಆರ್ಕೆ ಫಿಲ್ಮ್ ಲಾಂಛನದಲ್ಲಿ ಡಿ.ಕೆ. ರಾಮಕೃಷ್ಣ ನಿರ್ಮಿಸುತ್ತಿರುವ ಚಲನಚಿತ್ರಕ್ಕೆ ಒನಕೆ ಓಬವ್ವ ಎಂದು ನಾಮಕರಣ ಮಾಡಿರುವುದಕ್ಕೆ ಛಲವಾದಿ ಮಹಾಸಭಾ ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಒನಕೆ ಓಬವ್ವ ಚಿತ್ರದುರ್ಗದ ಐತಿಹಾಸಿಕ ಮಹಿಳೆ. ಕನ್ನಡ ನಾಡಿನ ಶಕ್ತಿ ಎಂದು ತಿಳಿದು ಆ ಮಹಾತಾಯಿ ಹೆಸರನ್ನು ಆಕೆಗೆ ಸಂಬಂಧಪಡದ `ಸ್ಟಂಟ್~ ಚಲನಚಿತ್ರವೊಂದಕ್ಕೆ ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುವುದನ್ನು ವೀರವನಿತೆ ಒನಕೆ ಓಬವ್ವಳ ವಂಶಸ್ಥರಾದ ನಾವು ಸಹಿಸುವುದಿಲ್ಲ ಮತ್ತು ಖಂಡಿಸುತ್ತೇವೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ. ನಿರಂಜನಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ದೇಶದ ಮಹಾರಾಜರು, ರಾಣಿಯರು, ತಮ್ಮ ರಾಜ್ಯ ನೆಲ, ಜಲ ಸಂಪತ್ತು, ಅಧಿಕಾರಕ್ಕಾಗಿ ಶತ್ರುಗಳ ವಿರುದ್ಧ ಹೋರಾಡಿದ ಹಲವು ಉದಾಹರಣೆಗಳಿವೆ. ಆದರೆ, ಸಾಮಾನ್ಯ ಛಲವಾದಿ ಮಹಿಳೆಯೊಬ್ಬರು ಚಿತ್ರದುರ್ಗದ ಪ್ರಭು ಮದಕರಿನಾಯಕನ ಮೇಲಿನ ರಾಜಭಕ್ತಿ, ದೇಶಾಭಿಮಾನ ಸಲುವಾಗಿ ಶತ್ರುಗಳ ವಿರುದ್ಧ ನಿಂತು ಒನಕೆ ಹಿಡಿದು ಏಕಾಂಗಿಯಾಗಿ ಹೋರಾಡಿದ್ದು ದುರ್ಗದಲ್ಲಿ ಬಿಟ್ಟರೆ ಪ್ರಾಯಶಃ ಮತ್ತೆಲ್ಲೂ ಕಾಣಸಿಗದು ಎಂದು ತಿಳಿಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಇತಿಹಾಸ ಕಂಡ ಅಸಾಮಾನ್ಯ ನಿಸ್ವಾರ್ಥಿ ಮಹಿಳೆಯೊಬ್ಬರ ಹೆಸರನ್ನು ಆಕೆಯ ಜೀವನ ಚರಿತ್ರೆಗೆ ಯಾವುದೇ ವಿಧದಲ್ಲಿ ಸಂಬಂಧಪಡದಂತಹ ಚಲನಚಿತ್ರಕ್ಕೆ ಬಳಸುತ್ತಿರುವುದು ಸಿನಿಮಾ ತಯಾರಕರ ಬೌದ್ಧಿಕ ದಿವಾಳಿತನಕ್ಕೆ ಮರುಕಪಡುವಂತಾಗಿದೆ.
ಐತಿಹಾಸಿಕ ಪುರುಷರು, ಮೇರು ವ್ಯಕ್ತಿಗಳ ಹೆಸರನ್ನು ಹಣ ಮಾಡುವ ಆಸೆಗಾಗಿ, ವಾಣಿಜ್ಯ ಉದ್ದೇಶವಿಟ್ಟುಕೊಂಡು ಉಪಯೋಗಿಸಬಾರದು ಎಂದು ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚರಿಸಿದ್ದರೂ ಪುನರಾವರ್ತನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.