ಬೆಂಗಳೂರು: ಯುವ ಚಿತ್ರನಟ ಹೇಮಂತ್ (27) ಬುಧವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು.
ದೊಡ್ಡಬಳ್ಳಾಪುರದವರಾದ ಹೇಮಂತ್ `ನೆನಪಿನಂಗಳ' ಚಿತ್ರದಲ್ಲಿ ನಾಯಕನಟರಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಅವರ ತಂದೆ ಜಿ. ರಾಮಕೃಷ್ಣ ಈ ಚಿತ್ರವನ್ನು ನಿರ್ಮಿಸಿದ್ದರು. ಮಂಗಳವಾರ ಸಂಜೆ ಹೆಬ್ಬಾಳದಲ್ಲಿನ ಜಿಮ್ನಲ್ಲಿ ವ್ಯಾಯಾಮದಲ್ಲಿ ತೊಡಗಿದ್ದ ವೇಳೆ ಹೇಮಂತ್ಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಸುಕಿನ 3.15ರ ಸಮಯದಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಂದೆ ರಾಮಕೃಷ್ಣ, ತಾಯಿ ಚೌಡೇಶ್ವರಿ ಮತ್ತು ಸಹೋದರರರಾದ ವಸಂತ್ ಕುಮಾರ್ ಹಾಗೂ ಮನೋಜ್ ಕುಮಾರ್ ಅವರನ್ನು ಹೇಮಂತ್ ಅಗಲಿದ್ದಾರೆ.