ನವದೆಹಲಿ (ಪಿಟಿಐ): ದೇಶದಲ್ಲಿ ಲೆಕ್ಕಕ್ಕೆ ಸಿಗದ ಅಥವಾ ಕಾನೂನುಬಾಹಿರವಾದ ಚಿನ್ನದ ವಹಿವಾಟು ನಡೆಯುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿವೆ.
ಕೇಂದ್ರೀಯ ಮಾಹಿತಿ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ವಿಷಯ ಸ್ಪಷ್ಟಪಡಿಸಲಾಗಿದೆ. ಮಾಹಿತಿ ಆಯುಕ್ತ ದೀಪಕ್ ಸಂಧು ನೀಡಿದ್ದ ನಿರ್ದೇಶನ ಅನ್ವಯ `ಆರ್ಬಿಐ~ ಮತ್ತು ಹಣಕಾಸು ಸಚಿವಾಲಯ ಪ್ರಮಾಣ ಪತ್ರ ಸಲ್ಲಿಸಿದ್ದವು.
ದೇಶದಲ್ಲಿ ಲೆಕ್ಕಕ್ಕೆ ಸಿಗದ ಚಿನ್ನದ ಮಾರಾಟ, ಬಳಕೆ ಮತ್ತಿತರ ಸಂಗತಿಗಳ ಕುರಿತು ಸಾಮಾಜಿಕ ಕಾರ್ಯಕರ್ತ ಎಸ್. ಸಿ. ಅಗರ್ವಾಲ್, ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ವಿವರಗಳಿಗೆ ಪ್ರತಿಯಾಗಿ, ಮಾಹಿತಿ ಆಯೋಗವು ವಿವರಣೆ ಕೇಳಿತ್ತು.
ಅಗರವಾಲ್ ಅವರು ಮೊದಲು ಕಂದಾಯ ಇಲಾಖೆಯಿಂದ ಮಾಹಿತಿ ಬಯಸಿದ್ದರು. ಆ ಅರ್ಜಿಯನ್ನು ಹಣಕಾಸು ಸಚಿವಾಲಯದ ವಿವಿಧ ವಿಭಾಗಗಳಿಗೆ ರವಾನಿಸಲಾಗಿತ್ತು. ಈ ವಿಷಯದ ಬಗ್ಗೆ ತಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಎಲ್ಲ ವಿಭಾಗಗಳು ಉತ್ತರಿಸಿದ್ದವು.