ಗದಗ: ಸಾಮಾನ್ಯ ಸೈಕಲ್ನಲ್ಲಿ ನಿತ್ಯ ಅಭ್ಯಾಸ; ಗೆಳೆಯರಿಂದ ಪಡೆದ ಸೈಕಲ್ನಲ್ಲಿ ಸ್ಪರ್ಧೆ. ಆದರೂ ಸಾಮರ್ಥ್ಯದಲ್ಲಿ ಹಿಂದೆ ಬಿದ್ದಿಲ್ಲ.
ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ನಾಲ್ಕು ಚಿನ್ನದ ಪದಕಗಳ ಸಾಧನೆಯ ಒಡತಿ, ಬಾಗಲಕೋಟೆ ಜಿಲ್ಲಾ ತಂಡದ ಶೈಲಾ ಮಟ್ಯಾಳ ಕಳೆದ ಬಾರಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಷಿಪ್ಗೆ ಕೂಡ `ಸಾಲದ ಸೈಕಲ್' ಹೊತ್ತುಕೊಂಡು ಹೋಗಿದ್ದರು.
ಬಡತನ ಬೆನ್ನ ಹಿಂದೆಯೇ ಇದ್ದರೂ ಸಾಧನೆಯ ಹಾದಿಯಲ್ಲಿ ಹಿಂದೆ ಬೀಳದ ಶೈಲಾ ಅವರು ದಸರಾ ರೋಡ್ ಸೈಕ್ಲಿಂಗ್ ಚಾಂಪಿಯನ್ಷಿಪ್, ಬೆಳಗಾವಿ ಮುಕ್ತ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿದ್ದರು. ಕಳೆದ ಬಾರಿ ಬೀದರ್ನಲ್ಲಿ ನಡೆದ ರಾಜ್ಯ ರೋಡ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ತಲಾ ಒಂದು ಬೆಳ್ಳಿ ಮತ್ತು ಕಂಚು ಗೆದ್ದುಕೊಂಡ ಅವರು ಈ ಬಾರಿ ಅಪರೂಪದ ಸಾಧನೆ ಮಾಡಿ ಮೆರೆದರು.
ವಿಜಾಪುರ ಜಿಲ್ಲೆ ಕೊಲ್ಹಾರದ ಸಂಗಪ್ಪ ಮಟ್ಯಾಳ-ರೇಣುಕಾ ದಂಪತಿ ಮಗಳಾದ ಶೈಲಾ ಬಾಗಲಕೋಟೆಯ ಸಾಖರೆ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ.
`ಪರರ ಹೊಲದಲ್ಲಿ ಕೆಲಸ ಮಾಡುವ ಅಪ್ಪ-ಅಮ್ಮನಿಂದ ಸೈಕಲ್ ಕೊಡಿಸಲು ಸಾಧ್ಯವಿಲ್ಲ. ಹೀಗಾಗಿ ಗೆಳೆಯರ ಸೈಕಲ್ ತೆಗೆದುಕೊಂಡು ಸ್ಪರ್ಧೆಗೆ ಹೋಗುತ್ತೇನೆ. ಅಭ್ಯಾಸ ಮಾಡಲು ಕೋಚ್ ದುಂಡಪ್ಪ ಅಥಣಿ ಅವರು ನೀಡಿರುವ ಕಬ್ಬಿಣದ ಸೈಕಲ್ ಇದೆ' ಎಂದು ಪದಕಗಳನ್ನು ಗೆದ್ದ ಸಂಭ್ರಮದಲ್ಲಿದ್ದ ಶೈಲಾ `ಪ್ರಜಾವಾಣಿ'ಗೆ ತಿಳಿಸಿದರು.